ತುಮಕೂರು: ‘ಹಿಂದೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಹಿಂದುತ್ವ ತ್ಯಜಿಸುವ ಪರಿಸ್ಥಿತಿ ಸೃಷ್ಟಿ ಮಾಡಲಾಗಿತ್ತು. ಈಗ ಮತ್ತೆ ದೇಶದಲ್ಲಿ ಅದೇ ರೀತಿಯ ವಾತಾವರಣ ಸೃಷ್ಟಿ ಮಾಡಲಾಗುತ್ತಿದೆ’ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯವರಿಗೆ ಯಾರೂ ಹಿಂದುತ್ವದ ಪವರ್ ಆಫ್ ಆಟಾರ್ನಿ ಕೊಟ್ಟಿಲ್ಲ. ನಾವು ಹಿಂದೂಗಳೇ, ಹಿಂದುತ್ವವಾದಿಗಳೇ. ಆದರೆ, ಅನಗತ್ಯವಾಗಿ ಈ ವಿಚಾರದಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ’ ಎಂದು ಆರೋಪ ಮಾಡಿದರು.
ಶ್ರೀರಾಮನನ್ನು ಭೂಮಂಡಲಕ್ಕೆ ಪರಿಚಯಿಸಿದ್ದೆ ಮಹರ್ಷಿ ವಾಲ್ಮೀಕಿ. ಹಾಗಾಗಿ ಮೊದಲು ವಾಲ್ಮೀಕಿ ದೇವಸ್ಥಾನ ನಿರ್ಮಿಸಬೇಕು. ವಾಲ್ಮೀಕಿ ರಾಮಾಯಣ ಗ್ರಂಥ ಬರೆಯದಿದ್ದರೆ ಜಗತ್ತಿಗೆ ರಾಮನ ಪರಿಚಯವೇ ಆಗುತ್ತಿರಲಿಲ್ಲ. ವಿಪರ್ಯಾಸ ಎಂದರೆ ಅಂತಹ ಮಹರ್ಷಿ ವಾಲ್ಮೀಕಿ ದೇಗುಲವನ್ನು ಎಲ್ಲೂ ನಿರ್ಮಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಮಮಂದಿರದಂತೆ ವಾಲ್ಮೀಕಿ ದೇವಸ್ಥಾನವನ್ನೂ ನಿರ್ಮಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಲಾಗುವುದು ಎಂದು ರಾಜಣ್ಣ ಹೇಳಿದರು.