ತುಮಕೂರು: ಇಲ್ಲಿನ ಸಪ್ತಗಿರಿ ಬಡಾವಣೆಯ ಪ್ರಥಮ ದರ್ಜೆ ಗುತ್ತಿಗೆದಾರ ಟಿ.ಎನ್. ಪ್ರಸಾದ್ ಅವರ ಆತ್ಮಹತ್ಯೆಗೆ ಸಾಲಗಾರರ ಒತ್ತಡವೇ ಕಾರಣ ಎಂಬ ಸಂಗತಿ ಹೊರಬಿದ್ದಿದೆ.
ತಾಲ್ಲೂಕಿನ ದೇವರಾಯನದುರ್ಗದ ಅತಿಥಿ ಗೃಹದಲ್ಲಿ ಶುಕ್ರವಾರ ಸಾಲದ ಒತ್ತಡ ತಾಳಲಾರದೆ ಪ್ರಸಾದ್ (50) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಜಿಲ್ಲೆಯಲ್ಲಿ 20 ವರ್ಷಗಳಿಂದ ಅವರು ಗುತ್ತಿಗೆದಾರ
ರಾಗಿ ಕೆಲಸ ಮಾಡುತ್ತಿದ್ದರು.
ಹೇಮಾವತಿ ನಾಲಾ ವಿಭಾಗ, ಲೋಕೋಪಯೋಗಿ ಇಲಾಖೆಯಡಿ ಹಲವು ಕಾಮಗಾರಿಗಳನ್ನು ನಿರ್ವಹಿಸಿದ್ದರು.
‘2015–16, 2016–17ನೇ ಸಾಲಿನಡಿ ಪ್ರಸಾದ್ ಅವರ ಸ್ನೇಹಿತರೊಬ್ಬರು ಶಿವಮೊಗ್ಗದಲ್ಲಿ ನಗರೋತ್ಥಾನ ಯೋಜನೆಯಡಿ ₹ 4 ಕೋಟಿ ಮೊತ್ತದ ಕಾಮಗಾರಿಗಳ ಗುತ್ತಿಗೆ ಪಡೆದಿದ್ದರು. ಈ ಸ್ನೇಹಿತನೊಟ್ಟಿಗೆ ಪ್ರಸಾದ್ ಕೂಡ ಪಾಲುದಾರರಾಗಿ ಕಾಮಗಾರಿಗಳನ್ನು ನಿರ್ವಹಿಸಿದ್ದರು. ಇದೇ ಯೋಜನೆಯಡಿ ಹೆಚ್ಚುವರಿಯಾಗಿ ನಿರ್ವಹಿಸಿದ ಚರಂಡಿ, ಸಿ.ಸಿ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳ ಬಿಲ್ ಪಾವತಿಯಾಗಿರಲಿಲ್ಲ. ಇದರಿಂದ ಅವರು ನೊಂದಿದ್ದರು’ ಎಂದು ಪ್ರಸಾದ್ ಅವರ ದೊಡ್ಡಪ್ಪನ ಪುತ್ರ, ಪ್ರಥಮದರ್ಜೆ ಗುತ್ತಿಗೆದಾರ ರಾಧೇಶ್ಯಾಮ್ ‘ಪ್ರಜಾವಾಣಿ’ಗೆ ತಿಳಿಸಿ ದರು.
‘ನಗರೋತ್ಥಾನ ಯೋಜನೆಯಡಿಯ ಹೆಚ್ಚುವರಿ ಕಾಮಗಾರಿಗಳಿಗೆ ಸಂಬಂಧಿಸಿ ದಂತೆ ಎಷ್ಟು ಕೋಟಿ ರೂಪಾಯಿ ಬಿಲ್ ಬಾಕಿ ಇತ್ತು ಎಂಬುದು ನನಗೆ ತಿಳಿ ದಿಲ್ಲ. 2018ರಿಂದಲೂ ಈ ಸಂಬಂಧ ಶಿವಮೊಗ್ಗಕ್ಕೆ ಪದೇ ಪದೇ ಹೋಗಿ ಬರು ತ್ತಿದ್ದರು. ಆದರೆ, ಬಾಕಿ ಮೊತ್ತ ಬಿಡುಗಡೆಯಾಗಿರಲಿಲ್ಲ’ ಎಂದು ಹೇಳಿದರು.
‘ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡ ಅತಿಥಿಗೃಹದ ಪಕ್ಕದಲ್ಲಿಯೇ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ ಮಯೂರ ವರ್ಮ ಅತಿಥಿ ಗೃಹದ ದುರಸ್ತಿ ಗುತ್ತಿಗೆಯನ್ನು ನಾನೇ ಪಡೆದಿದ್ದೆ. ₹ 46 ಲಕ್ಷದ ಈ ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳಲು ಅವ ರಿಗೆ ವಹಿಸಿದ್ದೆ. ಇಲ್ಲಿಯವರೆಗೆ ಈ ಕಾಮಗಾರಿಯಡಿ ₹ 18.75 ಲಕ್ಷ ಬಿಡುಗಡೆಯಾಗಿದೆ. ಇನ್ನೂ ₹ 26 ಲಕ್ಷ ಬಿಲ್ ಬಾಕಿ ಇದೆ’ ಎಂದು ವಿವರಿಸಿದರು.
‘ತೀವ್ರ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದ ಪ್ರಸಾದ್ ಎರಡು ವರ್ಷದ ಹಿಂದೆ ನಗರದ ಸರಸ್ವತಿಪುರಂನಲ್ಲಿ ನಿರ್ಮಿಸಿದ್ದ ₹ 1 ಕೋಟಿ ಬೆಲೆ ಬಾಳುವ ಸ್ವಂತ ಮನೆಯನ್ನು ಮಾರಾಟ ಮಾಡಿದ್ದರು. ಏಳೆಂಟು ವರ್ಷದ ಹಿಂದೆ ಹೇಮಾವತಿ ನಾಲಾ ವಿಭಾಗದಲ್ಲಿ ನಿರ್ವಹಿಸಿದ್ದ ಕಾಮಗಾರಿಯೊಂದರ ₹ 1 ಲಕ್ಷ ಬಾಕಿ ಬಿಲ್ ಪಡೆಯಲು ಕಚೇರಿಗೆ ಅಲೆದಾಡುತ್ತಿದ್ದರು’ ಎಂದು ವಿವರಿಸಿದರು.
ಭ್ರಷ್ಟಾಚಾರ ಉಲ್ಬಣ: ‘ಸರ್ಕಾರಿ ಇಲಾಖೆ ಗಳಲ್ಲಿ ಭ್ರಷ್ಟಾಚಾರ ಜಾಸ್ತಿಯಾಗಿದೆ. ಮಾಡಿದ ಸಾಲ ತೀರಿಸಲಾಗದೆ ತುಮಕೂರಿನ ನಾಲ್ವರು ಗುತ್ತಿಗೆದಾರರು ಈಗಾಗಲೇ ಊರು ಬಿಟ್ಟು ಬೇರೆಡೆ ಹೋಗಿದ್ದಾರೆ’ ಎಂದು ಗುತ್ತಿಗೆದಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಡಿ. ಬಲರಾಮಯ್ಯ ಪ್ರತಿಕ್ರಿಯೆ ನೀಡಿದರು.
‘ಇಲಾಖೆಗಳಲ್ಲಿ ಪ್ರತಿಯೊಂದಕ್ಕೂ ಲಂಚ ಪಡೆಯುತ್ತಿದ್ದಾರೆ. ಕಾಮಗಾರಿಗಳ ಬಿಲ್ಗಳನ್ನು ಸೂಕ್ತ ಸಮಯಕ್ಕೆ ಬಿಡುಗಡೆ ಮಾಡದೆ ಸತಾಯಿಸುತ್ತಾರೆ. ಇದರಿಂದ ಗುತ್ತಿಗೆದಾರರು ಮಾಡಿದ ಸಾಲಕ್ಕೆ ಬಡ್ಡಿ ಬೆಳೆಯುತ್ತದೆ. ಇದರಿಂದ ಆತ್ಮಹತ್ಯೆ ದಾರಿ ಹಿಡಿಯುವ ವಾತಾವರಣ ಸೃಷ್ಟಿಯಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.