ತುಮಕೂರು: ವಿದ್ಯುತ್ ಕಾಮಗಾರಿಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಯಿತು.
ನಗರದ ಬಿಜಿಎಸ್ ವೃತ್ತದಿಂದ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಅಶೋಕ ರಸ್ತೆ, ಸ್ವಾತಂತ್ರ್ಯ ಚೌಕದ ಮುಖಾಂತರ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ಸಾಗಿತು. ಕಿಸಾನ್ ಸಭಾ ಕಾರ್ಯಕರ್ತರು, ರೈತರು ಹೆಜ್ಜೆ ಹಾಕಿದರು.
ಜಿಲ್ಲೆಯ ಹಾರೋನಹಳ್ಳಿ, ಕನ್ನೇನಹಳ್ಳಿ, ವಕ್ಕೋಡಿ ಗೊಲ್ಲರಹಟ್ಟಿ, ಕುಪ್ಪೂರು, ಮರಳೇನಹಳ್ಳಿ, ಊರುಕೆರೆ ಗ್ರಾಮದ ಹಲವು ಸರ್ವೆ ನಂಬರ್ಗಳಲ್ಲಿ ರೈತರಿಗೆ ಯಾವುದೇ ಮುನ್ಸೂಚನೆ ನೀಡದೆ, ವಿದ್ಯುತ್ ಲೈನ್ ಬದಲಾವಣೆ ಮಾಡಲಾಗುತ್ತಿದೆ. ಭೂಮಿ, ಗಿಡ–ಮರಗಳಿಗೆ ಪರಿಹಾರ ನೀಡದೆ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಕಿಸಾನ್ ಸಭಾದ ಜಿಲ್ಲಾ ಸಂಚಾಲಕ ಗಿರೀಶ್ ಆಕ್ರೋಶ ವ್ಯಕ್ತಪಡಿಸಿದರು.
ಇರುವ ಅಲ್ಪ ಸ್ವಲ್ಪ ಭೂಮಿ ನಂಬಿ ಜೀವನ ಸಾಗಿಸುತ್ತಿದ್ದ ಪರಿಶಿಷ್ಟರು, ಹಿಂದುಳಿದ ವರ್ಗದವರು, ಬಡವರಿಗೆ ಸಂಕಷ್ಟ ಎದುರಾಗಿದೆ. ಈ ಭಾಗದಲ್ಲಿ ಪ್ರತಿ ಕುಂಟೆ ಜಮೀನು ₹10 ಲಕ್ಷದಿಂದ ₹15 ಲಕ್ಷ ಬೆಲೆ ಬಾಳುತ್ತಿದೆ. ಎತ್ತಿನಹೊಳೆ, ಹೇಮಾವತಿ ನಾಲಾ ಕಾಮಗಾರಿ, ಕೈಗಾರಿಕಾ ಕಾಮಗಾರಿಗಳಿಗೆ ಪರಿಹಾರ ನೀಡುತ್ತಿದ್ದಾರೆ. ಆದರೆ ವಿದ್ಯುತ್ ಕಾಮಗಾರಿಗಳಿಗೆ ಪರಿಹಾರ ನೀಡದೆ ರೈತರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ದೂರಿದರು.