ತುಮಕೂರು: ನಗರದ ಕೆ.ಆರ್.ಬಡಾವಣೆಯಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದಿಂದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 116ನೇ ಜಯಂತಿ ಆಚರಿಸಲಾಯಿತು.
ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಧನಿಯಕುಮಾರ್ ಮಾತನಾಡಿ, ‘ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ತಳ ಸಮುದಾಯದ ಜನರು ಗೌರವದ ಬದುಕು ನಡೆಸುವಂತೆ ನೋಡಿಕೊಂಡರು. ಮಲ ಹೊರುವ ಪದ್ಧತಿ ರದ್ದು ಮಾಡಿ, ಸಾವಿರಾರು ವರ್ಷಗಳ ಅವಮಾನದಿಂದಬದುಕುತ್ತಿದ್ದ ಜನರು ತಲೆ ಎತ್ತಿ ಬದುಕುವಂತೆ ಮಾಡಿದಧೀಮಂತ ವ್ಯಕ್ತಿ’ ಎಂದು ನೆನಪಿಸಿಕೊಂಡರು.
ಮಹಿಳೆಯರು, ವಿಧವೆಯರಿಗೆ ಮಾಸಾಶನ ನೀಡಿದರು. ಹಿಂದುಳಿದ ವರ್ಗಗಳ ಆಯೋಗ ರಚಿಸಿ ಸರ್ಕಾರಿ ಸೌಲಭ್ಯಗಳು ಸಮರ್ಪಕವಾಗಿ ಶೋಷಿತ ಸಮುದಾಯಗಳಿಗೆ ತಲುಪುವಂತೆ ಮಾಡಿದರು ಎಂದು ಹೇಳಿದರು.
ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಚಂದ್ರಶೇಖರಗೌಡ, ‘ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ಕಾನೂನಿನ ಮೂಲಕ ಸಮಾನತೆ ತಂದುಕೊಡಲು ಅರಸು ಶ್ರಮಿಸಿದರು. ಅವರ ತತ್ವಾದರ್ಶಗಳನ್ನೇ ಗುರಿಯಾಗಿಟ್ಟುಕೊಂಡು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ತಳ ಸಮುದಾಯಗಳ ಉನ್ನತಿಗೆ ಶ್ರಮಿಸುತ್ತಿದೆ’ ಎಂದರು.
ಬಲಿಜ ಸಮಾಜದ ಪ್ರಕಾಶ್, ವೆಂಕಟಾಚಲ, ಸವಿತಾ ಸಮಾಜದ ಮಂಜೇಶ್, ತಿಗಳ ಸಮಾಜದ ಜಗದೀಶ್, ಪರಿಶಿಷ್ಟ ಸಮಾಜದ ವಿಠಲ್, ಪ್ರಭಾಕರ್, ಕುರುಹೀನಶೆಟ್ಟಿ ಸಮಾಜದ ಎನ್.ವೆಂಕಟೇಶ್, ಅನಿಲ್ ಕುಮಾರ್ ಪಾಲ್ಗೊಂಡಿದ್ದರು.