ತುಮಕೂರು: ನಗರದ 25ನೇ ವಾರ್ಡ್ನ ಮುನಿಸಿಪಲ್ ಬಡಾವಣೆಯಲ್ಲಿ ₹ 75 ಲಕ್ಷ ವೆಚ್ಚದಲ್ಲಿ ಸಿ.ಸಿ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.
ಬಡಾವಣೆಯಲ್ಲಿರುವ ಮಹಾತ್ಮಗಾಂಧಿ ಉದ್ಯಾನದಲ್ಲಿ ದೊಡ್ಡ ಮರ ಇದೆ. ಅದನ್ನು ಟ್ರೀಪಾರ್ಕ್ ಆಗಿ ಸ್ಮಾರ್ಟ್ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತದೆ. ಜಿಮ್, ವಾಯುವಿಹಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ನಗರದಲ್ಲಿ ಎಲ್ಲೆಲ್ಲಿ ರಾಜಗಾಲುವೆ, ಕನ್ಸರ್ವೆನ್ಸಿ ಒತ್ತುವರಿ ಆಗಿದೆಯೋ ಕೂಡಲೇ ತೆರವುಗೊಳಿಸಬೇಕು. ಒತ್ತುವರಿ ಮಾಡಿದ್ದರೆ ಮುಂದೊಂದು ದಿನ ಒತ್ತುವರಿ ತೆರವು ಕಟ್ಟಿಟ್ಟ ಬುತ್ತಿ. ಬಡಾವಣೆಗಳ ಅಭಿವೃದ್ಧಿಗಾಗಿ ಒತ್ತುವರಿ ತೆರವು ಅಗತ್ಯವಾಗಿದೆ. ನಾಗರಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
‘ಕೊರೊನಾದಿಂದ ಆರ್ಥಿಕ ಚಟುವಟಿಕೆಗಳು ಕುಸಿದಿವೆ. ಈಗ ಶೇ 20ರಷ್ಟು ಮಾತ್ರ ಆರ್ಥಿಕ ಚಟುವಟಿಕೆಗಳು ನಡೆಯುತ್ತಿವೆ. ತೆರಿಗೆ ಸಂಗ್ರಹದಲ್ಲೂ ಇಳಿಕೆ ಕಂಡಿದೆ. ಅಭಿವೃದ್ಧಿಗೆ ಅನುದಾನಗಳು ಬಿಡುಗಡೆ ಆಗುವುದು ಕಷ್ಟ. ಇಂತಹ ಪರಿಸ್ಥಿತಿಯಲ್ಲೂ ನಗರಕ್ಕೆ ಮುಖ್ಯಮಂತ್ರಿ ₹ 25 ಕೋಟಿ ನೀಡಿರುವುದು ನಮ್ಮ ಅದೃಷ್ಟ ಎಂದೇ ಭಾವಿಸಬೇಕು’ ಎಂದು ತಿಳಿಸಿದರು.