ತೋವಿನಕೆರೆ: ಪ್ರತಿ ವರ್ಷ ಕೊಟ್ಯಾಂತರ ರೂಪಾಯಿ ಆದಾಯ ತರುತ್ತಿರುವ ಹುಣಸೆ ಕಾಯಿಗಳಿಗೆ ಕಜ್ಜಿ ರೋಗ ಬಂದು ಬೆಳೆಗಾರರು ತತ್ತರಿಸುವಂತಾಗಿದೆ.
ತೋವಿನಕೆರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಹುಣಸೆ ಮರಗಳಿವೆ. ಇದು ಪ್ರಮುಖ ಆದಾಯದ ಮೂಲವೂ ಹೌದು. ಕಳೆದ ಐದು ವರ್ಷದಿಂದ ಸಾವಿರಾರು ಹುಣಸೆ ಸಸಿಗಳನ್ನು ರೈತರು ಹೊಸದಾಗಿ ನಾಟಿ ಮಾಡಿದ್ದಾರೆ. ಬರ ಪ್ರದೇಶದ ಬಂಗಾರದ ಬೆಳೆಯಾಗಿ ವಿಜೃಂಭಿಸುತ್ತಿದೆ. ಹಿಂದಿನ ವರ್ಷ ಫಸಲು ಕಡಿಮೆ ಇದ್ದು ಉತ್ತಮ ಬೆಲೆ ಸಿಕ್ಕಿತ್ತು. ಈ ವರ್ಷ ಉತ್ತಮವಾದ ಇಳುವರಿ ಇದ್ದು ಕಾಯಿಗಳಲ್ಲಿ ಕಜ್ಜಿ ಸಣ್ಣದಾಗಿ ಪ್ರಾರಂಭವಾಗಿ ಇಡೀ ಮರದಲ್ಲಿನ ಶೇ 50 ಕಾಯಿಗಳಿಗೆ ವ್ಯಾಪಿಸಿ ಹೆಚ್ಚುತ್ತಿದೆ.
ಕಜ್ಜಿ ಬಂದಿರುವ ಕಾಯಿಗಳ ಹಣ್ಣಾಗುವ ಭಾಗ ಕಪ್ಪು ಬಣ್ಣಕ್ಕೆ ಉಪಯೋಗಿಸಲು ಆಗದ ರೀತಿ ಪುಡಿಯಾಗುತ್ತಿದೆ. ಕಳೆದ ವರ್ಷಕ್ಕಿಂತ ಹೆಚ್ಚು ಇಳುವರಿ ಇದ್ದು ಕಜ್ಜೆ ಬಂದಿರುವುದು ಮರದಲ್ಲಿನ ಇತರೆ ಕಾಯಿಗಳಿಗೆ, ಅಕ್ಕಪಕ್ಕದ ಮರಗಳಿಗೆ ಹರಡುತ್ತಿರುವುದು ಬೆಳೆಗಾರ ಮತ್ತು ಗುತ್ತಿಗೆದಾರರಿಗೆ ಆತಂಕ ತಂದಿದೆ.
ಮಣ್ಣಿನಲ್ಲಿ ಮುಚ್ಚಿ
ಬೆಳೆಗಾರರೂ ಹೂವಿನ ಹಂತದಲ್ಲಿ ಬೇವಿನ ಎಣ್ಣೆಯನ್ನು ಸೋಪ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಣೆ ಮಾಡಬೇಕು. ಮುಂದಿನ ವರ್ಷದಿಂದ ರೈತರು ಮುಂಜಾಗೃತವಾಗಿ ಸಿಂಪಡಣೆ ಮಾಡಬೇಕು. ಈಗ ಕಜ್ಜಿ ಬಂದಿರುವ ಕಾಯಿ ನೆಲದ ಮೇಲೆ ಬಿದ್ದಿದ್ದರೆ ಮಣ್ಣಿನಲ್ಲಿ ಮುಚ್ಚುವ ಅಥವ ಸುಟ್ಟು ಹಾಕಬೇಕು. ಗಿಡಗಳಿಗೆ ಕೊಟ್ಟಿಗೆ ಗೊಬ್ಬರ ಕೊಡಬೇಕು.