ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಿಗಲ್: ಪೊಲೀಸ್ ಕಾವಲಿನಲ್ಲಿ ರಸಗೊಬ್ಬರ ವಿತರಣೆ

ತಾಲ್ಲೂಕಿನಲ್ಲಿ ಉಲ್ಬಣಿಸಿದ ರಸಗೊಬ್ಬರದ ಸಮಸ್ಯೆ
Last Updated 19 ಸೆಪ್ಟೆಂಬರ್ 2020, 2:01 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕಿನಲ್ಲಿ ರಸಗೊಬ್ಬರದ ಸಮಸ್ಯೆ ಹೆಚ್ಚಾಗಿದ್ದು, ಶುಕ್ರವಾರ ಟಿಎಪಿಎಂಎಸ್‌ನಲ್ಲಿ ಪೊಲೀಸ್ ಕಾವಲಿನಲ್ಲಿ ರಸಗೊಬ್ಬರ ವಿತರಣೆ ಮಾಡಲಾಯಿತು.

ರಸಗೊಬ್ಬರ ಲಾರಿ ಬರುವ ಮುನ್ನವೇ ಬೆಳಿಗ್ಗೆಯಿಂದಲೇ ನೂರಾರು ರೈತರು ಟಿಎಪಿಎಂಎಸ್ ಮುಂದೆ ಜಮಾವಣೆಗೊಂಡಿದ್ದರು. ಮಧ್ಯಾಹ್ನ ಲಾರಿ ಬರುತ್ತಿದ್ದಂತೆ ರೈತರ ಸಂಖ್ಯೆಯೂ ಹೆಚ್ಚಾಗಿ, ನಿಯಂತ್ರಿಲಾಗದೆ ಸಹಾಯಕ ಕೃಷಿ ನಿರ್ದೇಶಕಿ ಸೌಮ್ಯಶ್ರೀ ಪೊಲೀಸರ ಮೊರೆ ಹೋದರು.

ರೈತರಿಂದ ಆಧಾರ್ ಪ್ರತಿ ಪಡೆದು ನಂತರ ಹೆಬ್ಬೆಟಿನ ಗುರುತು ಪಡೆದು ಗೊಬ್ಬರ ವಿತರಣೆ ಮಾಡಬೇಕಾಗಿತ್ತು. ಸಹಕಾರ ಸಂಘದವರು ಮತ್ತು ಅಂಗಡಿಯ ಮಾಲೀಕರು ನಿಯಮಗಳನ್ನು ಪಾಲಿಸದೆ ಕೇವಲ ಆಧಾರ್ ಪ್ರತಿಗಳನ್ನು ಪಡೆದು ಗೊಬ್ಬರ ವಿತರಣೆ ಮಾಡುತ್ತಿದ್ದರು. ಇದರಿಂದ ಅನರ್ಹರೂ ರೈತರ ಹೆಸರಿನ ಆಧಾರ್ ಪ್ರತಿ ನೀಡಿ ಗೊಬ್ಬರ ಪಡೆದುಕೊಳ್ಳುತ್ತಿದ್ದರು. ಬಳಿಕ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಅಲ್ಲದೆ ಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ನಂತರ ಲಾಭ ಪಡೆದುಕೊಳ್ಳುತ್ತಿದ್ದರು. ಇದರಿಂದಾಗಿ ಸಮಸ್ಯೆ ಹೆಚ್ಚಾಗಿ ತೀವ್ರ ಆರೋಪಗಳು ಬಂದ ಕಾರಣ ವ್ಯವಸ್ಥೆ ಬದಲಾವಣೆ ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಸೌಮ್ಯಶ್ರೀ ತಿಳಿಸಿದ್ದಾರೆ.

ಶುಕ್ರವಾರ ರೈತರಿಂದ ಆಧಾರ್ ಪ್ರತಿ ಪಡೆದು ಆಧಾರ್‌ನಲ್ಲಿ ನಮೂದಾಗಿರುವ ಹೆಸರಿನವರ ಬಳಿ ಹೆಬ್ಬೆಟ್ಟಿನ ಮುದ್ರೆ ಪಡೆದು ವಿತರಣೆಗೆ ಮುಂದಾದಾಗ ಬೆಳಿಗ್ಗೆಯಿಂದ ಕಾದಿರುವ ರೈತರು ತಡವಾಗುತ್ತದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು. ಆದರೂ ಅಧಿಕಾರಿಗಳು ನಿಯಮಾವಳಿ ಪ್ರಕಾರವೇ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿ ವಿತರಣೆಗೆ ಕ್ರಮ ತೆಗೆದುಕೊಂಡರು.

ಯೂರಿಯಾಕ್ಕಾಗಿ ರಸ್ತೆಗಿಳಿದ ರೈತರು
ಕುಣಿಗಲ್
: ರಸಗೊಬ್ಬರಕ್ಕಾಗಿ ರೈತರು ಟಿಎಪಿಎಂಎಸ್ ಕಚೇರಿ ಮುಂಭಾಗ ರಸ್ತೆಗಿಳಿದು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ರಾತ್ರಿ ನಡೆಯಿತು. ಪೊಲೀಸರ ಪ್ರವೇಶದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು.

ಟಿಎಪಿಎಂಎಸ್ ಕಚೇರಿಗೆ ಶುಕ್ರವಾರ ಮೂರು ಲಾರಿ ಲೋಡ್ ಯೂರಿಯೂ ಗೊಬ್ಬರ ಬಂದಿದೆ. ಸಂಜೆವೆರೆಗೂ ಎರಡು ಲೋಡ್ ವಿತರಣೆ ಮಾಡಿದ್ದು, ರಾತ್ರಿಯಾದ ಕಾರಣ ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಸಹಕಾರ ಸಂಘದವರು ಶನಿವಾರ ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ. ಇದಕ್ಕೆ ಅಸಮಾಧಾನಗೊಂಡ ರೈತರು ಬೆಳಿಗ್ಗೆಯಿಂದ ಕಾದಿದ್ದೇವೆ. ಈಗಲೇ ವಿತರಿಸಿ ಎಂದು ಪಟ್ಟು ಹಿಡಿದರು. ಟಿಎಪಿಎಂಎಸ್ ಕಚೇರಿ ಮುಂಭಾಗದ ಹಳೇ ರಾಷ್ಟ್ರೀಯ ಹೆದ್ದಾರಿ 49ರಲ್ಲಿ ಪ್ರತಿಭಟನೆ ನಡೆಸಿದರು.

20 ನಿಮಿಷ ಸಂಚಾರಕ್ಕೆ ಅಡಚಣೆ ಆಯಿತು. ನಂತರ ಪಿಎಸ್ಐ ವಿಕಾಸ್ ಗೌಡ ಸಿಬ್ಬಂದಿಯೊಂದಿಗೆ ಬಂದು ರೈತರನ್ನು ಸಮಾಧಾನಪಡಿಸಿ ಚದುರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT