ಶಿರಾ: ಕ್ಷೇತ್ರದಲ್ಲಿ ಕುಂಠಿತವಾಗಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಚುರುಕು ನೀಡಲು ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರನ್ನು ಗೆಲ್ಲಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
ತಾಲ್ಲೂಕಿನ ದೊಡ್ಡ ಆಲದಮರ ಗ್ರಾಮದಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಿದರು.
ಉಪಚುನಾವಣೆ ಫಲಿತಾಂಶ ಮುಂದಿನ ವಿಧಾನಸಭಾ ಚುನಾವಣೆ ಮೇಲೆ ಮಹತ್ವದ ಪರಿಣಾಮ ಬೀರುವುದರಿಂದ ಪ್ರತಿಯೊಬ್ಬರು ಎಚ್ಚರವಹಿಸಿ ಮತ ನೀಡಿ. ಪಕ್ಷದ ಮುಖಂಡರು ಸಂಘಟಿತರಾಗಿ ಪ್ರಚಾರ ನಡೆಸುತ್ತಿದ್ದು, ಶಿರಾ ಮತ್ತು ಆರ್.ಆರ್. ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದರು.
ಶಾಸಕ ಡಾ.ಜಿ.ಪರಮೇಶ್ವರ್ ಮಾತನಾಡಿ, ‘ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳಿಂದ ಜನರು ಬೇಸತ್ತಿದ್ದಾರೆ. ಕೊರೊನಾ ನಿಯಂತ್ರಣದಲ್ಲಿ ಸರ್ಕಾರ ವಿಫಲವಾಗಿದೆ’ ಎಂದರು.
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿ, ‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿ ಮಾಡದಿದ್ದರೆ ಕೊರೊನಾ ಸಂಕಷ್ಟ ಸಮಯದಲ್ಲಿ ಹೊಟ್ಟೆಗೆ ಅನ್ನ ಇಲ್ಲದೆ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿತ್ತು. ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಜನಪರ ಕಾರ್ಯಕ್ರಮ ರೂಪಿಸಲು ಸಾಧ್ಯ’ ಎಂದರು.
ಯತ್ತಪ್ಪನಹಟ್ಟಿ, ಹಾಲುದೊಡ್ಡೇರಿ, ದೊಡ್ಡ ಆಲದಮರ, ಬ್ರಹ್ಮಸಂದ್ರ, ಚಿನ್ನೇನಹಳ್ಳಿ, ತರೂರು, ಭೂಪಸಂದ್ರ, ತಾಳಗುಂದ, ಚಿಕ್ಕಗೂಳ, ಹಾಲೇನಹಳ್ಳಿ, ಚಿಕ್ಕನಹಳ್ಳಿ, ಕಳ್ಳಂಬೆಳ್ಳ, ಯಲದಬಾಗಿ ಗ್ರಾಮಗಳಲ್ಲಿ ರೋಡ್ ಶೊ ನಡೆಸಿದರು.
ಕೆಪಿಸಿಸಿ ವಕ್ತಾರ ಬಿ.ಎನ್.ಚಂದ್ರಪ್ಪ, ಕಾಂಗ್ರೆಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಸಾಸಲು ಸತೀಶ್, ಮುಖಂಡರಾದ ಎಚ್.ವಿ.ವೆಂಕಟೇಶ್, ಕಲ್ಲಶೆಟ್ಟಿಹಳ್ಳಿ ರುದ್ರೇಶ್, ಪರ್ವತಪ್ಪ, ದಿವಾಕರ್ ಗೌಡ, ಭೂಪಸಂದ್ರ ಜನ್ನಪ್ಪ, ಕಲಾವಿದ ರಾಜಣ್ಣ, ಟಿ.ಕೆ.ನಾಗರಾಜ್, ರಾಕೇಶ್, ಕುಭೇಂದ್ರ, ಮಧು, ರಂಗನಾಥ್, ಮಹೇಶ್ ಇದ್ದರು.