ಮಧುಗಿರಿ: ‘ನಾನು ಜಾತಿ ಆಧಾರಿತ ರಾಜಕಾರಣ ಮಾಡುವುದಿಲ್ಲ. ಜನರ ಪ್ರೀತಿಯ ರಾಜಕಾರಣ ಮಾಡುತ್ತೇನೆ’ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಹಾಗೂ ಬಿಜೆಪಿ ಮುಖಂಡ ಎಲ್.ಸಿ. ನಾಗರಾಜು ತಿಳಿಸಿದರು.
ಪಟ್ಟಣದ ತಾಲ್ಲೂಕು ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.
‘ಮಧುಗಿರಿ ಕ್ಷೇತ್ರದ ಮಣ್ಣಿನ ಮಗ ನಾನು. ತಾಲ್ಲೂಕಿನ ಜನತೆಯ ಆಸ್ಮಿತೆ ಕಾಪಾಡಲು ರಾಜಕಾರಣಕ್ಕೆ ಬಂದಿದ್ದೇನೆ’ ಎಂದರು.
ಮಧುಗಿರಿ ವಿಧಾನಸಭಾ ಕ್ಷೇತ್ರದ ಅತಿಹೆಚ್ಚು ಮತದಾರರನ್ನು ಹೊಂದಿರುವ ಕವಣದಾಲ ಗ್ರಾ.ಪಂ. ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ವಿಎಸ್ಎಸ್ಎನ್ ನಿರ್ದೇಶಕರು ಹಾಗೂ ಜೆಡಿಎಸ್ ಮುಖಂಡರು ಪಕ್ಷಕ್ಕೆ ಸೇರಿದ್ದಾರೆ. ಪಕ್ಷವು ಸ್ಥಳೀಯ ಅಭ್ಯರ್ಥಿಗೆ ಅವಕಾಶ ಮಾಡಿಕೊಟ್ಟಿದೆ. ಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿ ಆಯ್ಕೆಯಾಗುವುದು ಖಚಿತ ಎಂದು ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷ ಪಿ.ಎಲ್. ನರಸಿಂಹಮೂರ್ತಿ ಮಾತನಾಡಿ, ಈ ಬಾರಿ ಯುವಪಡೆಯು ಬಿಜೆಪಿಗೆ ಬೆಂಬಲವಾಗಿ ನಿಂತಿದೆ ಎಂದರು.
ತಾಲ್ಲೂಕು ಬಿಜೆಪಿ ಕಾರ್ಯದರ್ಶಿ ನಾಗೇಂದ್ರ, ಮುಖಂಡರಾದ ಶ್ರೀರಂಗನಾಥ, ಪದ್ಮಣ್ಣ, ಲಕ್ಷ್ಮಿಕಾಂತ, ಲಕ್ಷ್ಮೀನಾರಾಯಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಂಗನಾಥ್, ರವಿ ಯಾದವ್, ಮುಖಂಡರಾದ ನಾಗೇಂದ್ರ, ಶಿವಕುಮಾರ್, ನವೀನ್, ರಂಗನಾಥ್ ಹಾಜರಿದ್ದರು.