ಕುಣಿಗಲ್: ಹಾಸನ ಪೆನ್ಡ್ರೈವ್ ಪ್ರಕರಣವನ್ನು ಸಿಬಿಐಗೆ ವಹಿಸಲು ಆಗ್ರಹಿಸಿದ ತಾಲ್ಲೂಕು ಜೆಡಿಎಸ್ ಕಾರ್ಯಕರ್ತರು ಮಂಗಳವಾರ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಗ್ರೇಡ್ 2 ತಹಶೀಲ್ದಾರ್ ಯೋಗೀಶ್ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್.ಜಗದೀಶ ಮಾತನಾಡಿ, ‘ಜೆಡಿಎಸ್ ಪ್ರಜ್ವಲ್ ಪರ ಹೋರಾಟ ಮಾಡುತ್ತಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕಿದೆ. ಸರ್ಕಾರ ನೇಮಕ ಮಾಡಿರುವ ಎಸ್ಐಟಿ ತನಿಖಾ ತಂಡ ಸರ್ಕಾರದ ಪ್ರತಿನಿಧಿಯಾಗಿ ಮತ್ತೂ ಡಿಕೆಶಿಯ ಗುಲಾಮರಾಗಿ ಕಾರ್ಯನಿರ್ವಹಿಸುವುದರಿಂದ ನ್ಯಾಯ ಸಿಗುವ ಲಕ್ಷಣವಿಲ್ಲ ಎಂಬುದು ಶಾಸಕ ಎಚ್.ಎಂ.ರೇವಣ್ಣ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿಯಲ್ಲಿ ಖಚಿತವಾಗಿದೆ’ ಎಂದರು.
ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿರುವ ಕಾರಣ ಪ್ರಧಾನಿ ನರೇಂದ್ರ ಮೋದಿಯವರಿಗೂ ಕಳಂಕ ತರುವ ರೀತಿಯಲ್ಲಿ ವರ್ತಿಸುತ್ತಿರುವುದು ಖಂಡನೀಯ. ಕಾಂಗ್ರೆಸ್ನ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಕುತಂತ್ರದಿಂದ ಜೆಡಿಎಸ್ ಪಕ್ಷವನ್ನು ನಿರ್ನಾಮವಾಗಲು ಕಾರ್ಯಕರ್ತರು ಬಿಡುವುದಿಲ್ಲ ಎಂದರು.
ತರಿಕೆರೆ ಪ್ರಕಾಶ್, ಕೆ.ಎಲ್.ಹರೀಶ್, ರಂಗಸ್ವಾಮಿ, ಕೃಷ್ಣ, ಮಹಾದೇವ ಇದ್ದರು.