ಮಾಗಿ ಉಳುಮೆ: ಹಿಂಗಾರು ಬೆಳೆ ಕಟಾವಾಗಿ, ಭೂಮಿಯಲ್ಲಿ ತೇವಾಂಶವಿದ್ದಾಗ ಮುಂಗಾರು ಮಳೆ ಬಿದ್ದ ತಕ್ಷಣ ಉಳುಮೆ ಮಾಡುವ ಪ್ರಕ್ರಿಯೆಗೆ ಮಾಗಿ ಉಳುಮೆ ಎನ್ನುತ್ತಾರೆ. ಮಾಗಿ ಉಳುಮೆಯಿಂದ ಹಲವು ಪ್ರಯೋಜನಗಳಿದ್ದು, ಮಳೆ ನೀರು ಸ್ಥಳದಲ್ಲೇ ಇಂಗಿ ಹೆಚ್ಚು ಕಾಲ ತೇವಾಂಶ ಉಳಿದು ಮುಂದಿನ ಬೇಸಾಯ ಕೈಗೊಳ್ಳಲು ಹಾಗೂ ಅಂತರ್ಜಲ ಮಟ್ಟ ವೃದ್ಧಿಸಲು ಸಾಧ್ಯವಾಗುತ್ತದೆ. ಭೂಮಿಯಲ್ಲಿರುವ ಕಳೆ ಬೀಜ, ಕೋಶಾವಸ್ಥೆಯಲ್ಲಿರುವ ಕೀಟ, ರೋಗಕಾರಕ ಶೀಲಿಂಧ್ರಗಳನ್ನು ಹೊರ ಹಾಕಿದಾಗ ಗಾಳಿ, ಬಿಸಿಲು, ಹಕ್ಕಿಗಳಿಂದ ನಾಶವಾಗುತ್ತವೆ. ಭೂಮಿಯ ಮೇಲೆ ಬಿದ್ದಿರುವ ಎಲೆ, ಕಸ-ಕಡ್ಡಿ, ಕೂಳೆ ಭೂಮಿಯೊಳಗೆ ಸೇರಿ ಕೊಳೆತು ಮಣ್ಣಿನ ಸಾವಯವ ಇಂಗಾಲ ಹೆಚ್ಚಿ ಫಲವತ್ತತೆ ವೃದ್ಧಿಯಾಗುತ್ತದೆ.