ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಿಗೇನಹಳ್ಳಿ: ಮಣ್ಣಿನ ಮಡಿಕೆಯಲ್ಲಿ ಪಾರಿವಾಳಗಳ ಪರಿವಾರ

ದೊಡ್ಡಹೊಸಹಳ್ಳಿಯಲ್ಲಿ ನೂರಾರು ವರ್ಷಗಳಿಂದ ನೆಲಸಿರುವ ಹಕ್ಕಿಗಳ ಸಂತತಿ
Published 13 ಆಗಸ್ಟ್ 2023, 6:27 IST
Last Updated 13 ಆಗಸ್ಟ್ 2023, 6:27 IST
ಅಕ್ಷರ ಗಾತ್ರ

ಕೊಡಿಗೇನಹಳ್ಳಿ: ದೊಡ್ಡಹೊಸಹಳ್ಳಿ ಗ್ರಾಮದ ದೇವಸ್ಥಾನದ ಬಳಿಯ ಮಣ್ಣಿನ ಮಡಿಕೆಗಳ ಗೂಡಿನಲ್ಲಿ ಪಾರಿವಾಳಗಳ ಸಂತತಿಯೊಂದು ನೂರಾರು ವರ್ಷಗಳಿಂದ ವಾಸವಾಗಿರುವುದು ಗ್ರಾಮಸ್ಥರ ಮತ್ತು ನೋಡುಗರ ಮನಸೆಳೆಯುವುದರ ಜೊತೆಗೆ, ಗ್ರಾಮಕ್ಕೆ ಮೆರುಗು ನೀಡುವಂತಿವೆ.

ಪುರವರ ಹೋಬಳಿಯ ದೊಡ್ಡಹೊಸಹಳ್ಳಿ ಗ್ರಾಮದ ರಾಮಾಂಜನೇಯಸ್ವಾಮಿ ದೇವಸ್ಥಾನದ ಬಲಭಾಗದ ಮಣ್ಣಿನ ಗೂಡಿನಲ್ಲಿ ನೂರಾರು ವರ್ಷಗಳಿಂದ ಪಾರಿವಾಳಗಳ ಪರಿವಾರ ನೆಲೆಸಿದೆ.

200 ವರ್ಷದ ಹಿಂದೆ ಪಟೇಲ್ ನರಸೇಗೌಡ ಅವರಿಗೆ ಪಾರಿವಾಳಗಳೆಂದರೆ ಮೆಚ್ಚು. ಹಾಗಾಗಿ ಅವರು ಎರಡು ಪಾರಿವಾಳಗಳನ್ನು ಬೇರೆಡೆಯಿಂದ ತಂದು ಗ್ರಾಮದಲ್ಲಿನ ರಾಮಾಂಜನೇಯ ದೇವಸ್ಥಾನದ ಬಲಭಾಗದಲ್ಲಿ ಗೂಡು ಕಟ್ಟಿ ಬಿಟ್ಟದ್ದರಂತೆ. ಮುಂದೆ ಪಾರಿವಾಳಗಳ ಸಂತತಿ ಹೆಚ್ಚಾಗಿದ್ದಕ್ಕೆ ಅವುಗಳ ವಾಸಕ್ಕೆ ತೊಡಕಾಗದಂತೆ ನರಸೇಗೌಡರು ಕೆಲ ಗ್ರಾಮಸ್ಥರ ಸಹಕಾರದೊಂದಿಗೆ ಕಲ್ಲು ಕಂಬಗಳ ಮೇಲೆ ಕಲ್ಲುಗಳನ್ನು ಇರಿಸಿ ಅದರ ಮೇಲೆ ಮಣ್ಣಿನ ಮಡಿಕೆಗಳನ್ನು ಇಟ್ಟು ಗೂಡು ತಯಾರಿಸಿದರು. ಪಾರಿವಾಳಗಳ ಸಂತತಿ ಬೆಳೆದು ಇಂದು 250ಕ್ಕಿಂತ ಹೆಚ್ಚು ಪಾರಿವಾಳಗಳು ಇಲ್ಲಿ ಬೀಡು ಬಿಟ್ಟಿವೆ.

ಪುರವರ ಹೋಬಳಿಯ ದೊಡ್ಡಹೊಸಹಳ್ಳಿ ಗ್ರಾಮದ ರಾಮಾಂಜನೇಯ ದೇವಾಲಯದ ಪಕ್ಕದಲ್ಲಿ ಪಾರಿವಾಳಗಳಿಗೆ ಇರಿಸಿರುವ ಮಡಿಕೆ
ಪುರವರ ಹೋಬಳಿಯ ದೊಡ್ಡಹೊಸಹಳ್ಳಿ ಗ್ರಾಮದ ರಾಮಾಂಜನೇಯ ದೇವಾಲಯದ ಪಕ್ಕದಲ್ಲಿ ಪಾರಿವಾಳಗಳಿಗೆ ಇರಿಸಿರುವ ಮಡಿಕೆ

‘ಪಾರಿವಾಳಗಳು ಕೆಲ ಕಾಯಿಲೆಗಳಿಗೆ ಮದ್ದಾಗಿರುವುದರಿಂದ, ನಮ್ಮ ಸಂಬಂಧಿಕರಿಗೆ ಪಾರ್ಶ್ವವಾಯು ಪೀಡಿತರಾಗಿದ್ದಾರೆ, ಇತರೆ ಕಾಯಿಲೆಯಾಗಿದೆ. ಆ ಕಾಯಿಲೆಗೆ ಪಾರಿವಾಳ ಮಾಂಸ ಮದ್ದು. ಹಾಗಾಗಿ ಒಂದೆರೆಡು ಹಿಡಿದುಕೊಂಡು ಹೋಗುತ್ತೇವೆ ಎಂದು ಕೆಲವರು ಪಾರಿವಾಳ ಹಿಡಿದುಕೊಂಡು ಹೋಗುತ್ತಿದ್ದಾರೆ. ಇಲ್ಲದಿದ್ದರೆ ಅವುಗಳ ಸಂಖ್ಯೆ ಇನ್ನೂ ಸಾವಿರಾರು ಆಗುತ್ತಿತ್ತು’ ಎನ್ನುತ್ತಾರೆ ಗ್ರಾಮಸ್ಥ ನರಸೇಗೌಡ.

ಪಾರಿವಾಳು ಬಹಳ ಅದ್ಭುತ ನೆನಪಿನ ಶಕ್ತಿಯನ್ನು ಹೊಂದಿರುವುದಲ್ಲದೆ, ಅತ್ಯಂತ ಶಾಂತ ಸ್ವಭಾವದ ಪಕ್ಷಿಯಾಗಿರುವುದರಿಂದ ಹಿಂದಿನಿಂದಲೂ ರಾಜರು ಮತ್ತು ಕೆಲವರು ಅವುಗಳನ್ನು ಇಷ್ಟಪಟ್ಟು ಸಾಕುತ್ತಿದ್ದರು. ಪಾರಿವಾಳ ಮಂಗಳಕರ ಪಕ್ಷಿ ಎಂದು ಮತ್ತು ಅವುಗಳು ಮನೆಯಲ್ಲಿ ಇದ್ದರೆ ಲಕ್ಷ್ಮಿದೇವಿ ಇದ್ದಂತೆ ಎನ್ನುವುದರ ಜೊತೆಗೆ ಜನರು ಅನಾದಿ ಕಾಲದಿಂದಲೂ ಪಾರಿವಾಳಗಳೊಂದಿಗೆ ಉತ್ತಮ ಸಂಬಂಧ ಹೊಂದಿರುವುದರಿಂದ ನಮ್ಮ ಗ್ರಾಮದಲ್ಲೂ ದಿವಂಗತ ಪಟೇಲ್ ನರಸೇಗೌಡರು ತಂದು ಸಾಕಿರಬಹುದು ಎಂದು ಗ್ರಾಮದ ಹಿರಿಯರಾದ ನರಸಿಂಹಮೂರ್ತಿ ವಿವರಿಸಿದರು.

ಗ್ರಾಮದಲ್ಲಿನ ಮಕ್ಕಳು ರಂಪಾಟ ಮಾಡಿದರೆ ಅವರನ್ನು ಸಮಾಧಾನಪಡಿಸಲು ಮತ್ತು ಗ್ರಾಮಕ್ಕೆ ಯಾರಾದರೂ ಹೊಸಬರು ಅಥವಾ ನೆಂಟರು ಬಂದರೆ ಅವರಿಗೆ ಮೊದಲು ತೋರಿಸುವುದು ಪಾರಿವಾಳಗಳ ಹಿಂಡನ್ನು.
-ಡಿ.ಆರ್.ನರಸಿಂಹಮೂರ್ತಿ ದೊಡ್ಡಹೊಸಹಳ್ಳಿ
ಗ್ರಾಮಸ್ಥರಿಗೆ ಪಾರಿವಾಳದ ಬಗ್ಗೆ ಹೆಚ್ಚು ಒಲವು ಇರುವುದರಿಂದ ಕೆಲವರು ಅವುಗಳಿಗೆ ವಿವಿಧ ಕಾಳುಗಳನ್ನು ತಂದು ಹಾಕುತ್ತಾರೆ. ಕಣ ಹೊಲಗಳಲ್ಲಿ ತಿನ್ನುವ ಪಾರಿವಾಳಗಳಿಗೆ ಯಾರೊಬ್ಬರೂ ಅಡ್ಡಿ ಮಾಡದಿರುವುದು ಜನರಿಗೆ ಅವುಗಳ ಬಗ್ಗೆ ಇರುವ ಪ್ರೀತಿ ತೋರುತ್ತದೆ.
-ರಾಮಕೃಷ್ಣರೆಡ್ಡಿ ಪಟೇಲ್ ನರಸೇಗೌಡರ ಮೊಮ್ಮಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT