ಗುಬ್ಬಿ: ಇತಿಹಾಸ ಪ್ರಸಿದ್ಧ ಗುಬ್ಬಿಯ ಗೋಸಲ ಚನ್ನಬಸವೇಶ್ವರ ಸ್ವಾಮಿ ರಥೋತ್ಸವವು ವೈಭವಯುತವಾಗಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮಂಗಳವಾರ ಮಧ್ಯಾಹ್ನ ನೆರವೇರಿತು.
ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್ ಹಿರೇಮಠ ರಥೋತ್ಸವಕ್ಕೆ ಚಾಲನೆ ನೀಡಿದರು.
ತೊರೆ ಮಠದ ರಾಜಶೇಖರ ಸ್ವಾಮೀಜಿ, ತೇವಡಿಹಳ್ಳಿ ಮಠದ ಗೋಸಲ ಚನ್ನಬಸವೇಶ್ವರ ಸ್ವಾಮೀಜಿ, ಬೆಟ್ಟದಹಳ್ಳಿ ಚಂದ್ರಶೇಖರ ಸ್ವಾಮೀಜಿ ಹಾಗೂ ದೊಡ್ಡಗುಣಿ ರೇವಣ್ಣ ಸಿದ್ದೇಶ್ವರ ಸ್ವಾಮೀಜಿ ಭಾಗವಹಿಸಿದ್ದರು.
ಸುಡುಬಿಸಿಲಿನ ನಡುವೆಯೂ ಕೊರೊನಾವನ್ನು ಲೆಕ್ಕಿಸದೆಅಪಾರ ಭಕ್ತರು ಭಾಗವಹಿಸಿದ್ದರು.
ಭಕ್ತರು ಬಾಳೆಹಣ್ಣು ದವನವನ್ನು ಸ್ವಾಮಿಯವರ ತೇರಿಗೆ ಎಸೆಯುವುದರ ಮೂಲಕ ತಮ್ಮ ಹರಕೆ ತೀರಿಸಿದರು. ‘ಕೊರೊನಾ ತೊಲಗಲಿ, ಗುಬ್ಬಿಯಪ್ಪನ ಕೃಪೆ ಭಕ್ತರ ಮೇಲಿರಲಿ’ ಎಂದು ಭಕ್ತರು ಜೈಕಾರ ಹಾಕಿದರು.
ಬಿಗಿ ಪೊಲೀಸ್ ಬಂದೋಬಸ್ತ್ ಇದ್ದರೂ, ಜನ ಜಂಗುಳಿಯ ನಡುವೆ ಕಳ್ಳರು ತಮ್ಮ ಕೈಚಳಕ ತೋರಿದ ಘಟನೆಗಳು ನಡೆದವು.
ಕೊರೊನಾ ನಿಯಮ ಅನುಸಾರ ಈ ಬಾರಿ ಪಾನಕ, ಫಲಹಾರಗಳ ವಿತರಣೆ ನಿಷೇಧಿಸಲಾಗಿತ್ತು. ಕೆಲವೆಡೆ ಮಾತ್ರ ಮಜ್ಜಿಗೆ ವಿತರಿಸಲಾಯಿತು. ರಥೋತ್ಸವದ ನಂತರ ಭಕ್ತ ಸಮೂಹಕ್ಕೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.