ಪಾವಗಡ: ಆರ್.ಹೊಸಕೋಟೆಯ 6 ವರ್ಷ ಬಾಲಕಿ ಸೇರಿದಂತೆ ತಾಲ್ಲೂಕಿನ 3 ಮಂದಿಗೆ ಬುಧವಾರ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ.
ರೆಡ್ಡಿ ಕಾಲೊನಿಯಲ್ಲಿನ ಉಪನ್ಯಾಸಕ, ಹೊಸಹಳ್ಳಿ ತಾಂಡದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಮಂಗಳವಾರ ತಾಲ್ಲೂಕಿನ ಎಸ್.ಆರ್. ಪಾಳ್ಯದ 5 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿತ್ತು.
ಪಟ್ಟಣದಲ್ಲಿ ಭಾರತೀಯ ವೈದ್ಯಕೀಯ ಸಂಘ, ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಪದಾಧಿಕಾರಿಗಳು ಗ್ರಾಮೀಣ ಭಾಗದಲ್ಲಿ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಸಭೆ ನಡೆಸಿ ನಿಯಂತ್ರಣಾ ಕ್ರಮಗಳ ಬಗ್ಗೆ ವೈದ್ಯರೊಂದಿಗೆ ಚರ್ಚಿಸಿದರು.
ಸ್ವಾಮಿ ಜಪಾನಂದ ಜಿ ಮಾತನಾಡಿ, ಕಳೆದ ವಾರ ತಾಲ್ಲೂಕು ಸುರಕ್ಷಿತವಾಗಿತ್ತು. 4 ದಿನಗಳಿಂದ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸುರಕ್ಷತಾ ಕ್ರಮಗಳೊಂದಿಗೆ ಜನರಿಗೆ ವೈದ್ಯಕೀಯ ಸೇವೆ ನೀಡಬೇಕು ಎಂದರು.
ವೈದ್ಯ ಪ್ರೇಮಯೋಗಿ, ಪರಿಸ್ಥಿತಿ ಬಿಗಡಾಯಿಸುವ ಮುನ್ನ ಎಲ್ಲರೂ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ತಾಲ್ಲೂಕಿನ ಜನ ಆರೋಗ್ಯ ಕಾಪಾಡುವತ್ತ ಶ್ರಮಿಸಬೇಕು ಎಂದರು.
ಡಾ.ಜಿ.ವೆಂಕಟರಾಮಯ್ಯ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಯೊಂದಿಗೆ ಸೇರಿ ಕೋವಿಡ್– 19 ನಿಯಂತ್ರಿಸಲು ತಂಡವಾಗಿ ಕಾರ್ಯ ನಿರ್ವಹಿಸುವ ಅಗತ್ಯವಿದೆ ಎಂದರು.