ತುಮಕೂರು: ’ಮಕ್ಕಳು ಪಠ್ಯ ಅಭ್ಯಾಸದ ಜೊತೆಗೆ ಸ್ಕೌಟ್ಸ್ ಮತ್ತು ಗೈಡ್ಸ್ನಂತಹ ಚಟುವಟಿಕೆಗಳು ಮಕ್ಕಳಲ್ಲಿ ಶಿಸ್ತು ಬೆಳೆಸುತ್ತದೆ. ಅವರ ಬೌದ್ಧಿಕ ಬೆಳವಣಿಗೆಯೂ ಆಗುತ್ತದೆ’ ಎಂದು ಸ್ಕೌಟ್ಸ್ ಅಂಡ್ ಗೈಡ್ಸ್ ಮುಖ್ಯ ಆಯುಕ್ತೆ ಆಶಾ ಪ್ರಸನ್ನಕುಮಾರ್ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಮಾತನಾಡಿದರು.
‘ರಾಜ್ಯದಲ್ಲಿ ಒಟ್ಟು ₹ 6.5ಲಕ್ಷ ವಿದ್ಯಾರ್ಥಿಗಳು, 20 ಸಾವಿರ ಶಿಕ್ಷಕರು ಇದ್ದಾರೆ. ಶಿಕ್ಷಣದೊಂದಿಗೆ ಶಿಸ್ತಿನ ಜೀವನಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳು ನೆರವಾಗಲಿವೆ’ ಎಂದರು.
‘ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ನಡೆಯುವ ಯಾವುದೇ ತರಬೇತಿಗಳಿಗೆ ತರಬೇತುದಾರರನ್ನು ಹೊರ ಜಿಲ್ಲೆಗಳಿಂದ ಕರೆತರಬೇಕಾದಂತಹ ಪರಿಸ್ಥಿತಿ ಬರಬಾರದು. ನಮ್ಮಲ್ಲಿ ಇರುವವರೇ ಅಗತ್ಯ ತರಬೇತಿಯನ್ನು ಪಡೆದುಕೊಳ್ಳಬೇಕು’ ಎಂದು ಸೂಚಿಸಿದರು.
‘ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗುತ್ತಾರೆ. ಉತ್ತಮ ಸಮಾಜದ ನಿರ್ಮಾಣಕ್ಕೆ ಸಹಕಾರಿ ಆಗುತ್ತಾರೆ ಎಂದು ಗಾಂಧೀಜಿ ಹೇಳಿದ್ದರು. ದೇಶದಲ್ಲಿ ಸ್ಕೌಟ್ಸ್ ಬೆಳವಣಿಗೆಗೆ ಬೆಂಬಲ ನೀಡಿದ್ದರು’ ಎಂದರು.
’ಸಂಸ್ಥೆಯ ಆಯುಕ್ತರಾಗಿ ಪಿ.ಜಿ.ಆರ್.ಸಿಂಧ್ಯಾ ಅವರು ಆಯುಕ್ತರಾದ ಬಳಿಕ ಸರ್ಕಾರವು ಸ್ಕೌಟ್ಸ್ ಚಟುವಟಿಕೆಗೆ ಅನುದಾನ ನೀಡಿ ಹೆಚ್ಚಿನ ಸಹಕಾರ ನೀಡುತ್ತಿದೆ’ ಎಂದು ನುಡಿದರು.
ಸಮಾವೇಶ ಉದ್ಘಾಟಿಸಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಜಗದೀಶ್ ಮಾತನಾಡಿ, ‘ಸ್ಕೌಟ್ಸ್ ಮತ್ತು ಗೈಡ್ಸ್ ಶಿಸ್ತುಬದ್ಧ ಸಂಸ್ಥೆಯಾಗಿದೆ’ ಎಂದರು.
ಈ ಸಂಸ್ಥೆಯಲ್ಲಿ ಸಿದ್ಧತೆ, ಬದ್ಧತೆ, ಶುದ್ಧತೆ ಇರುವುದರಿಂದಲೇ ಯಶಸ್ವಿಯಾಗುತ್ತಿದೆ’ ಎಂದು ಹೇಳಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಎಡಿಸಿ ಆಂಜಿನಪ್ಪ, ಆಯುಕ್ತರಾದ ವೇಣುಗೋಪಾಲ್ ಕೃಷ್ಣ ಮಾತನಾಡಿದರು. ತರಬೇತಿಯನ್ನು ಪಡೆದ ಗುರುನಾಯ್ಕ್, ವಿಮಲಾ, ಮಂಜುನಾಥ್ ಅವರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಗಂಗಾಧರ್, ರಮೇಶ್, ಕೆಂಪರಂಗಯ್ಯ, ಹುಚ್ಚಯ್ಯ, ಚೇತನ್ ಸೇರಿದಂತೆ ಇತರರು ಇದ್ದರು.