ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಲ್ಲಿ ಕಾಣದ ಆತ್ಮಾವಲೋಕನ

Last Updated 22 ನವೆಂಬರ್ 2020, 5:35 IST
ಅಕ್ಷರ ಗಾತ್ರ

ತುಮಕೂರು: ಶಿರಾ ವಿಧಾನಸಭೆ ಉಪಚುನಾವಣೆ ಫಲಿತಾಂಶ ಪ್ರಕಟಗೊಂಡು ಹತ್ತು ದಿನಗಳು ಕಳೆದಿದ್ದರೂ ಕಾಂಗ್ರೆಸ್‌ನಲ್ಲಿ ಇನ್ನೂ ಸೋಲಿನ ಆತ್ಮಾವಲೋಕನ ನಡೆದಿಲ್ಲ.

ವಿಜಯ ಸಾಧಿಸಿದಾಗತಮ್ಮಿಂದಲೇ ಗೆಲುವು ಎಂದು ಹಲವರು ಬೀಗುತ್ತಾರೆ. ಆದರೆ ಸೋಲಿನ ಹೊಣೆ ಹೊರಲು ಯಾರೂ ಮುಂದೆ ಬರುವುದಿಲ್ಲ. ಸೋಲು ಒಂದು ರೀತಿ ಅನಾಥ. ಈ ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್‌ನಲ್ಲಿ ಅಂತಹುದೇ ವಾತಾವರಣ ಕಂಡುಬಂದಿದೆ. ಸಾಮಾನ್ಯವಾಗಿ ಸೋಲು ಕಂಡ ನಂತರ ಅದಕ್ಕೆ ಕಾರಣಗಳನ್ನು ಪಟ್ಟಿಮಾಡಿ, ಆಗಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವುದು, ಮುಂದೆ ತಪ್ಪುಗಳಾಗದಂತೆ ಎಚ್ಚರ ವಹಿಸುವುದು, ಪಕ್ಷ ಸಂಘಟನೆಗೆ ಒತ್ತು, ಮುಂದಿನ ಚುನಾವಣೆ ವೇಳೆಗೆ ಏನೆಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂಬ ಬಗ್ಗೆ ಚರ್ಚಿಸಲಾಗುತ್ತದೆ. ಆದರೆ ಈವರೆಗೂ ಜಿಲ್ಲೆಯ ಮುಖಂಡರು ಅಂತಹ ಪ್ರಯತ್ನವನ್ನೇ ಮಾಡಿಲ್ಲ.

ನ. 2ರಂದು ಮತದಾನ ಮುಗಿಯುತ್ತಿದ್ದಂತೆ ಅಭ್ಯರ್ಥಿಯಾಗಿದ್ದ ಟಿ.ಬಿ.ಜಯಚಂದ್ರ ಕೊರೊನಾ ಸೋಂಕಿನಿಂದಾಗಿ ಆಸ್ಪತ್ರೆ ಸೇರಿದರು. ನ. 10ರಂದು ಮತಗಳ ಎಣಿಕೆ ಸಮಯದಲ್ಲೂ ಇರಲಿಲ್ಲ. ಇತ್ತೀಚೆಗಷ್ಟೇ ಆಸ್ಪತ್ರೆಯಿಂದ ಬಂದಿದ್ದು, ಶಿರಾ ಬಳಿಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಫಲಿತಾಂಶ ಪ್ರಕಟವಾದ ನಂತರ ಪಕ್ಷದ ಇತರ ನಾಯಕರೂ ಮತದಾರರಿಗೆ ಕೃತಜ್ಞತೆ ಹೇಳುವ ಸೌಜನ್ಯ ತೋರಿಸಲಿಲ್ಲ. ಪಕ್ಷದ ಹಿನ್ನಡೆಯಿಂದಕಂಗೆಟ್ಟಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಕನಿಷ್ಠ ಪಕ್ಷ ಆತ್ಮಸ್ಥೈರ್ಯ ತುಂಬಿ, ಮತ್ತಷ್ಟು ಕುಗ್ಗದಂತೆ ನೋಡಿಕೊಳ್ಳಲಿಲ್ಲ. ಯಾವ ನಾಯಕರೂ ಶಿರಾದತ್ತ ಹೋಗಿ ಬರಲಿಲ್ಲ. ಸೋಲನ್ನು ಅಷ್ಟೇ ಬೇಗನೆ ಮರೆತುಬಿಟ್ಟರು.

ಜಿಲ್ಲೆಯ ಹಿರಿಯ ನಾಯಕರಾದ ಡಾ.ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ, ಷಫಿ ಅಹಮದ್, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರು, ಇತರ ನಾಯಕರು ಚುನಾವಣೆ ಸಂದರ್ಭದಲ್ಲಿ ದುಡಿದ ಕಾರ್ಯಕರ್ತರ ಶ್ರಮವನ್ನು ನೆನಪು ಮಾಡಿಕೊಳ್ಳುವ ಪ್ರಯತ್ನ ಮಾಡಬೇಕಿತ್ತು. ಜಯಚಂದ್ರ ಅವರು ಆಸ್ಪತ್ರೆಯಿಂದ ಬಂದ ನಂತರವೂ ಯಾರೊಬ್ಬರೂ ಪ್ರಯತ್ನಿಸಲಿಲ್ಲ. ಹಿರೀಕರು ಒಂದೆಡೆ ಕುಳಿತು ಚರ್ಚಿಸುವ ಉದಾರತೆಯನ್ನೇ ತೋರಿಲ್ಲ.

ರವಾನೆಯಾಗದ ಸಂದೇಶ: ಚುನಾವಣೆಗೆ ಮುನ್ನ ಜಯಚಂದ್ರ, ಪರಮೇಶ್ವರ, ರಾಜಣ್ಣ ಅವರು ಒಂದೊಂದು ದಿಕ್ಕಿನಲ್ಲಿ ಇದ್ದರು. ಪರಸ್ಪರ ದೂಷಣೆ, ಒಬ್ಬರ ಮುಖವನ್ನು ಮತ್ತೊಬ್ಬರು ನೋಡದಂತಹ ಸ್ಥಿತಿಯಲ್ಲಿದ್ದರು. ರಾಜ್ಯ ನಾಯಕರು ಎಲ್ಲರನ್ನೂ ಒಗ್ಗೂಡಿಸಿ ಒಮ್ಮತದಿಂದ ಚುನಾವಣೆ ನಡೆಸುವಂತೆ ಸೂಚನೆ ನೀಡಿದ್ದರು. ಅದರಂತೆ ಹಿಂದಿನ ಎಲ್ಲಾ ಕಹಿ ಘಟನೆಗಳನ್ನು ಮರೆತು ಒಟ್ಟಾಗಿ ಚುನಾವಣೆ ಎದುರಿಸಿದರು. ಒಗ್ಗಟ್ಟಿನ ಸಂದೇಶ ರವಾನಿಸಿದರು. ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಆದರೂ ಮತದಾರರ ಮನಮುಟ್ಟಲು ಸಾಧ್ಯವಾಗಿಲ್ಲ.

ತಕ್ಷಣಕ್ಕೆ ಗ್ರಾಮ ಪಂಚಾಯಿತಿ ಚುನಾವಣೆ ಎದುರಿಸಬೇಕಿದೆ. ಅದು ಮುಗಿಯುವಷ್ಟರಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಬರಲಿದೆ. ನಂತರ ವಿಧಾನಸಭೆ ಚುನಾವಣೆಗೆ ಸಜ್ಜಾಗಬೇಕಿದೆ. ಆದರೆ ಜಿಲ್ಲೆಯ ನಾಯಕರು ಪಕ್ಷ ಸಂಘಟಿಸುವ ಕೆಲಸ ಮಾಡದಿದ್ದರೆ, ಕಾರ್ಯಕರ್ತರಿಗೆ ಧೈರ್ಯ ತುಂಬದಿದ್ದರೆ ಮುಂಬರುವ ಸಾಲುಸಾಲು ಚುನಾವಣೆಗಳನ್ನು ಎದುರಿಸುವುದಾರೂ ಹೇಗೆ ಎಂಬುದು ಪಕ್ಷದ ನಾಯಕರೊಬ್ಬರ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT