ತುಮಕೂರು: ಇತ್ತೀಚೆಗೆ ಕಾಡ್ಗಿಚ್ಚು ಬಹುದೊಡ್ಡ ಸಮಸ್ಯೆಯಾಗಿದ್ದು, ಅಪಾರ ಅರಣ್ಯ ಸಂಪತ್ತು ಕಳೆದುಕೊ ಳ್ಳುವಂತಾಗಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ‘ಐಯೋಟಿ’ (ಇಂಟರ್ನೆಟ್ ಆಫ್ ಥಿಂಗ್) ಎಂಬ ಯಂತ್ರವನ್ನು ಸಿದ್ಧಾರ್ಥ ತಾತ್ರಿಕ ಮಹಾವಿದ್ಯಾಲಯ ವಿದ್ಯಾರ್ಥಿಗಳು ಅವಿಷ್ಕಾರ ಮಾಡಿದ್ದಾರೆ.
ಶುಕ್ರವಾರ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ‘ರಾಜ್ಯಮಟ್ಟದ ವೈಜ್ಞಾನಿಕ ಅವಿಷ್ಕಾರಗಳ ಪ್ರದರ್ಶನ ಹಾಗೂ ಸ್ಪರ್ಧೆ’ಯಲ್ಲಿ ಈ ಯಂತ್ರ ಎಲ್ಲರ ಗಮನ ಸೆಳೆಯಿತು.
ಇದು ‘ವೈರ್ಲೆಸ್’ ಸೌರಶಕ್ತಿ ಚಾಲಿತ ಯಂತ್ರವಾಗಿದ್ದು, ಬೆಂಕಿ ಪತ್ತೆ ಮತ್ತು ನಿಯಂತ್ರಣ ಕೇಂದ್ರವಾಗಿ ಕೆಲಸ ಮಾಡಲಿದೆ. ಸುಮಾರು ಒಂದೂವರೆ ಕಿಲೋಮೀಟರ್ ವ್ಯಾಪ್ತಿಯಲ್ಲಿ ಬೆಂಕಿ ಕಾಣಿಸಿಕೊಂಡಲ್ಲಿ ಕೂಡಲೇ ಮಾಹಿತಿ ನೀಡಲಿದೆ. ಅಲ್ಲದೆ ಸ್ಥಳ, ಸಮಯ ಸಹಿತ ದೃಶ್ಯಾವಳಿಯನ್ನು ರವಾನಿಸಲಿದೆ. ಈ ಮಾಹಿತಿ ಮೇರೆಗೆ ಕೂಡಲೇ ಬೆಂಕಿ ನಂದಿಸಲು ಕ್ರಮ ಕೈಗೊಳ್ಳಬಹುದಾಗಿರುತ್ತದೆ.
ನೀರಿನ ಟ್ಯಾಂಕ್ನ್ನು ಸಹ ಈ ಯಂತ್ರಕ್ಕೆ ಕೂಡಿಸಬಹುದು. ಇದರಿಂದ ಸ್ವಲ್ಪ ಒತ್ತಡ ಕಡಿಮೆಯಾಗಲಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಯಂತ್ರವೇ ಸ್ವಯಂ ಚಾಲಿತವಾಗಿ ನೀರು ಚಿಮ್ಮಲಿದೆ. ಟ್ಯಾಂಕಿನಲ್ಲಿರುವ ನೀರು ಖಾಲಿಯಾಗುವವರೆಗೂ ಬೆಂಕಿ ನಂದಿಸಲಿದೆ.
ಇತ್ತೀಚೆಗೆ ನೀರಿನ ಸಮಸ್ಯೆ ಹೆಚ್ಚು ಬಾಧಿಸುತ್ತಿರುವ ಹಿನ್ನೆಲೆ ಈ ವ್ಯವಸ್ಥೆ ಚಾಲನೆಗೆ ಸ್ವಲ್ಪ ಕಷ್ಟವೇ. ಖಾಸಗಿ ಅರಣ್ಯದವರು ಈ ವ್ಯವಸ್ಥೆ ಅಳವಡಿಸಬಹುದು ಎಂದು ವಿದ್ಯಾರ್ಥಿ ಪ್ರೇಮ್ ಸಾಗರ್ ತಿಳಿಸಿದರು.
ಬೆಂಕಿ, ಬೆಂಕಿಯ ಜ್ವಾಲೆ ಮತ್ತು ಮಳೆ– ಈ ಮೂರು ಅಂಶಗಳನ್ನು ಈ ಯಂತ್ರ ಗ್ರಹಿಸಲಿದೆ. ಮಳೆ ಪ್ರಮಾಣ ಸೇರಿದಂತೆ ಹವಾಮಾನದ ಮಾಹಿತಿಯೂ ಸಂಗ್ರಹವಾಗಲಿದೆ. ಅಲ್ಲದೆ ದಿನ, ಸಮಯ, ಅಘವಡ ಸಹಿತ ವರ್ಷದಲ್ಲಾಗಿರುವ ಎಲ್ಲ ಮಾಹಿತಿಯುಳ್ಳ ದೃಶ್ಯಾವಳಿ ಸಂಗ್ರಹವಾಗಿರುತ್ತದೆ ಎಂದು ಹೇಳಿದರು.
ಈಗಾಗಲೇ ‘ಸ್ಯಾಟಲೈಟ್ ಇಮೇಜ್ ಪ್ರೊಸೆಸಿಂಗ್’ ಎಂಬ ವ್ಯವಸ್ಥೆ ಅರಣ್ಯ ಇಲಾಖೆ ಪರಿಚಯಿಸಿದೆ. ಆದರೆ ಇದು ಬೆಂಕಿ ಕಾಣಿಸಿಕೊಂಡ ಬಳಿಕ ಎಷ್ಟೋ ಹೊತ್ತಿಗೆ ಮಾಹಿತಿ ರವಾನೆ ಮಾಡಲಿದ್ದು, ಗುಣಮಟ್ಟದ ಚಿತ್ರ ಇರುವುದಿಲ್ಲ. ಹಾಗಾಗಿ ಬೆಂಕಿ ಕಾಣಿಸಿಕೊಂಡ ಸ್ಥಳ ಕಂಡು ಹಿಡಿದು, ಸ್ಥಳಕ್ಕೆ ಹೋಗಿ ಬೆಂಕಿ ನಂದಿಸಲು ಸಾಧ್ಯವಾಗುವುದಿಲ್ಲ. ಇದು ಅರಣ್ಯಾಧಿಕಾರಿಗಳಿಗೆ ಬಹಳ ಸಮಸ್ಯೆಯಾಗಿದೆ ಎನ್ನುತ್ತಾರೆ ವಿದ್ಯಾರ್ಥಿನಿ ಲಾವಣ್ಯ.
ಈ ದಿಸೆಯಲ್ಲಿ ಅರಣ್ಯಾಧಿಕಾರಿಗಳಿಗೆ ಉಪಯೋಗವಾಗುವ ಹಾಗೂ ಕಾಡ್ಗಿಚ್ಚನ್ನು ತಡೆಗಟ್ಟುವ ನಿಟ್ಟಿನಲ್ಲಿ ರಶ್ಮಿ ಇ.ಹೂಗಾರ್, ಪ್ರೇಮ್ಸಾಗರ್, ವಿನೋದ್ ಚೆನ್ನಪ್ಪ ಹಾಗೂ ಸಜ್ಜನ್ ಸೇರಿಈ ಯಂತ್ರವನ್ನು ಅವಿಷ್ಕಾರ ಮಾಡಿದ್ದೇವೆ. ಈ ಬಗ್ಗೆ ಅರಣ್ಯಾಧಿಕಾರಿಗಳ ಜತೆಗೆ ಚರ್ಚಿಸಿದ್ದೇವೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.