ತಿಪಟೂರು: ‘ನೊಣವಿನಕೆರೆ ಕಾಡಸಿದ್ದೇಶ್ವರಮಠ ದೈವ ಶಕ್ತಿಯ ಕೇಂದ್ರವಾಗಿದ್ದು, ಈ ಮಠದ ಕೃಪೆಯಿಂದ ನನ್ನ ಇಷ್ಟಾರ್ಥಗಳು ಈಡೇರಿವೆ’ ಎಂದು ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
ಗುರುವಾರ ತಾಲ್ಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರಮಠದ ನೂತನ ಶಿಲಾಮಠದ ಉದ್ಘಾಟನೆ ಪ್ರಯುಕ್ತ ಗುರುವಾರ ನಡೆದ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ‘ಇಲ್ಲಿನ ಶ್ರೀಗಳ ಆಶೀರ್ವಾದಿಂದ ತಮಗೆ ರಾಜಕೀಯ ಶಕ್ತಿ ಬಂದಿದೆ. ಭಕ್ತ ಮತ್ತು ಭಗವಂತನ ನಡುವೆ ನೋವು ನಲಿವು ಹಂಚಿಕೆಯಾಗುವುದು ಮಠ ಮಂದಿರಗಳಲ್ಲಿ ಮಾತ್ರ’ ಎಂದರು.
‘ಅಲ್ಲಿ ಭಕ್ತನಿಗೆ ಭಗವಂತ ಸನ್ಮಾರ್ಗದಲ್ಲಿ ನಡೆಯಲು ದಾರಿ ತೋರುತ್ತಾನೆ. ಮಠ ಮಾನ್ಯಗಳು ವಿದ್ಯೆ, ಅನ್ನ ದಾಸೋಹ ಮಾಡುತ್ತ ಸರ್ಕಾರ ಮಾಡದ ಕೆಲಸಗಳನ್ನು ಮಾಡುತ್ತಿವೆ’ ಎಂದು ತಿಳಿಸಿದರು. ‘ಸಮಾಜದಲ್ಲಿ ತಪ್ಪಾಗಳಾಗುತ್ತಿದ್ದರೆ, ಅನ್ಯಾಯ ನಡೆದರೆ ಧ್ವನಿ ಎತ್ತಿ ನೊಂದವರಿಗೆ ನ್ಯಾಯ ದೊರಕಿಸಿಕೊಟ್ಟು ಧರ್ಮ ಉಳಿಸುವ ಕಾರ್ಯವನ್ನು ಮಠ ಮಾನ್ಯಗಳು ಮಾಡುತ್ತವೆ. ಇದು ಭಾರತದ ಸಂಸ್ಕೃತಿ, ಪರಂಪರೆಯ ವಿಶೇಷವಾಗಿದೆ. ಈ ದೇಶದ ಮಣ್ಣಿನ ಪ್ರತಿ ಕಣ ಕಣದಲ್ಲೂ, ಪ್ರಕೃತಿಯಲ್ಲೂ ದೇವರನ್ನು ಕಾಣುತ್ತೇವೆ. ಧರ್ಮ ಮತ್ತು ಸಂಸ್ಕೃತಿ ಉಳಿಸುವ ಕಾರ್ಯವಾಗಬೇಕಿದೆ’ ಎಂದರು.
ಮಾಜಿ ಸಚಿವ ವಿ. ಸೋಮಣ್ಣ ಮಾತನಾಡಿ, ‘ಪ್ರೀತಿ ವಿಶ್ವಾಸ ನಮ್ಮಲ್ಲಿ ಬೆಳೆಯಬೇಕು. ಭಗವಂತ ಕೊಟ್ಟಿದ್ದರಲ್ಲಿ ಸ್ವಲ್ಪವನ್ನಾದರೂ ದಾನ ಧರ್ಮಕ್ಕೆ ಮೀಸಲಿಡಬೇಕು. ಈ ಮಠ ಜಾತ್ಯಾತೀತ ಮಠವಾಗಿದ್ದು, ಸಮಾಜದ ಎಲ್ಲರನ್ನೂ ಒಂದಾಗಿ ಕಾಣುತ್ತಿದೆ. ಆದ್ದರಿಂದಲೇ ರಾಜ್ಯದ ಮೂಲೆ ಮೂಲೆಗಳಿಂದಲೂ ಇಲ್ಲಿಗೆ ಭಕ್ತರು ಬಂದು ಆಶೀರ್ವಾದ ಪಡೆಯುತ್ತಾರೆ’ ಎಂದರು.
ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ‘ಆಧುನಿಕ ಜಗತ್ತಿನಲ್ಲಿರುವ ನಾವು ಶಾಂತಿ ನೆಮ್ಮದಿ ಹುಡುಕಿಕೊಂಡು ಹೋಗುವಂತಾಗಿದೆ. ಇಂತಹ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಶಾಂತಿ ನೆಮ್ಮದಿ ಕಂಡು ಕೊಳ್ಳಬೇಕಿದೆ. ಇದು ಪವಿತ್ರ ಮತ್ತು ಪವಾಡ ಕ್ಷೇತ್ರವಾಗಿದೆ. ಇದಕ್ಕೆ ಶ್ರೀಗಳ ತಪಶಕ್ತಿ ಮತ್ತು ಭಕ್ತರ ಸಹಕಾರ ಕಾರಣ’ ಎಂದರು. ಕರಿವೃಷಭದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಆಲ್ಬೂರು ನರಸಿಂಹ ಸ್ವಾಮೀಜಿ, ಹೊಸರಿತ್ತಿ ಗುದ್ದಲೀಶ್ವರ ಸ್ವಾಮೀಜಿ, ಕಡೂರು ಮಠದ ಸ್ವಾಮೀಜಿ, ಸಂಸದ ಡಿ.ಕೆ. ಸುರೇಶ್, ಮಾಜಿ ಸಚಿವ ಡಿ. ಸುಧಾಕರ್, ಕಾರ್ಪೋರೇಟರ್ಗಳಾದ ವಾಗೀಶ್, ಮೋಹನ್ಕುಮಾರ್, ಆನಂದ್ ಹೊಸೂರು, ವಿಶ್ವನಾಥಗೌಡ, ಅರುಣ್ ಸೋಮಣ್ಣ, ರಾಜ್ಯಸಭಾ ಸದಸ್ಯರಾದ ಜಿ.ಬಿ. ಚಂದ್ರಶೇಖರ್, ವಿಜಯ್ ಸಾಯಿರೆಡ್ಡಿ, ಕೆ.ಸಿ. ರಾಮುಮೂರ್ತಿ, ವಕೀಲ ಚಂದ್ರಮೌಳಿ, ಕೆಪಿಸಿಸಿ ಕಾರ್ಯದರ್ಶಿ ಸುದರ್ಶನ್, ಮಾಜಿ ಶಾಸಕ ಎಂ.ಡಿ. ಲಕ್ಷ್ಮಿನಾರಾಯಣ, ನಟ ರವಿಚೇತನ್, ಸಮಾಜ ಸೇವಕ ಕೆ.ಟಿ.ಶಾಂತಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಮೈಲಾರಿ ಇದ್ದರು.
‘ಶ್ರೀಗಳಿಂದ ರಾಜಕೀಯ ಶಕ್ತಿ’
‘ನೊಣವಿನಕೆರೆ ಕಾಡಸಿದ್ದೇಶ್ವರಮಠ ಶಕ್ತಿ, ಭಕ್ತಿ ಮತ್ತು ಸ್ಪೂರ್ತಿಯ ಕ್ಷೇತ್ರ. ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ಆಶೀರ್ವಾದಿಂದ ನನಗೆ ರಾಜಕೀಯ ಶಕ್ತಿ ಬಂದಿದೆ’ ಎಂದು ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
‘ನನಗೆ ಎದುರಾದ ಅನೇಕ ಸಂಕಷ್ಟ ಸಂದರ್ಭಗಳಲ್ಲಿ ನನಗೆ ಶ್ರೀರಕ್ಷೆಯಾಗಿ ನಿಂತಿದ್ದವರು ಇದೆ ಅಜ್ಜಯ್ಯ. ಶಾಂತಿ, ನೆಮ್ಮದಿಗೆ ಈ ಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ. ಇಲ್ಲಿ ಧಾರ್ಮಿಕ ಕಾರ್ಯಕ್ರಮ ಈ ದಿನ ಇದ್ದುದರಿಂದ ಬಜೆಟ್ ಅಧಿವೇಶನ ಇದ್ದರೂ ಬಂದು ಪಾಲ್ಗೊಂಡಿದ್ದೇನೆ' ಎಂದು ನುಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.