ತುಮಕೂರು: ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಅಶೋಕ ನಗರ ನಾಗರಿಕ ಹಿತರಕ್ಷಣಾ ಸಮಿತಿಯಿಂದ ನಗರದಲ್ಲಿ ಭಾನುವಾರ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಹಾಗೂ ಪೌರ ಕಾರ್ಮಿಕರಿಗೆ ಆಟೋಟ ಸ್ಪರ್ಧೆ ಆಯೋಜಿಸಲಾಗಿತ್ತು.
ಕಬಡ್ಡಿ, ರಂಗೋಲಿ ಸ್ಪರ್ಧೆ, ಗೀತೆ ಗಾಯನ, ರಸಪ್ರಶ್ನೆ, ಗುಂಡು ಎಸೆತ ಸೇರಿದಂತೆ ಇತರೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಪೌರ ಕಾರ್ಮಿಕರು ಒಳಗೊಂಡಂತೆ ಎಲ್ಲರು ಸಕ್ರಿಯವಾಗಿ ಹಲವು ಸ್ಪರ್ಧೆಗಳಲ್ಲಿ ತೊಡಗಿಸಿಕೊಂಡಿದ್ದರು.
ಮಹಾನಗರ ಪಾಲಿಕೆಯ ಆಯುಕ್ತೆ ಬಿ.ವಿ.ಅಶ್ವಿಜ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪೌರ ಕಾರ್ಮಿಕರು ಪ್ರತಿ ನಿತ್ಯ ಕೆಲಸದಲ್ಲಿ ನಿರತರಾಗಿರುತ್ತಾರೆ. ಅವರಿಗೆ ಹಲವು ಸ್ಪರ್ಧೆಗಳನ್ನು ಆಯೋಜಿಸಿರುವುದು ಉತ್ತಮ ನಡೆ. ನಗರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪಾಲಿಕೆ ಸದಸ್ಯ ಎಚ್.ಮಲ್ಲಿಕಾರ್ಜುನಯ್ಯ, ‘ಇದು ಕೇವಲ ಸ್ಪರ್ಧೆಯಾಗಿರದೆ, ಎಲ್ಲರೂ ಒಟ್ಟಾಗಿ ಬೆರೆಯುವ, ಪರಸ್ಪರ ಭಾವೈಕ್ಯತೆ ಬೆಳೆಸುವ ಆಶಯದ ಕಾರ್ಯಕ್ರಮವಾಗಿದೆ. ವಾರ್ಡ್ನ ಜನರಿಗಾಗಿ ಆರೋಗ್ಯ ತಪಾಸಣಾ ಶಿಬಿರ, ಉದ್ಯೋಗ ಮೇಳ, ಮಕ್ಕಳ ಬೇಸಿಗೆ ಶಿಬಿರ ಏರ್ಪಡಿಸಲಾಗುತ್ತಿದೆ’ ಎಂದು ಹೇಳಿದರು.
ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್, ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಕೆ.ವೆಂಕಟಸ್ವಾಮಿ, ಕಾರ್ಯದರ್ಶಿ ಬಿ.ಆರ್.ಉಮೇಶ್, ಸಾಹಿತಿ ಮುರಳಿಕೃಷ್ಣಪ್ಪ, ಮುಖಂಡರಾದ ಅಶೋಕ್ಕುಮಾರ್, ಸಂಜಯ್ನಾಯಕ್, ಗುರುಪ್ರಸಾದ್ ಇತರರು ಪಾಲ್ಗೊಂಡಿದ್ದರು.