ತುಮಕೂರು: 'ಕೆಂಪೇಗೌಡರ ದೂರದೃಷ್ಟಿ ಇಂದಿನ ಆಡಳಿತಗಾರರಿಗೆ ಇಲ್ಲ' ಎಂದು ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ನಾಡಪ್ರಭು ಕೆಂಪೇಗೌಡ ಪೀಠದಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ಮಾತನಾಡಿದರು.
‘ಶಾಸನಗಳ ಆಧಾರದ ಮೇಲೆ ಕಾಲ ನಿರ್ಣಯವಾಗುತ್ತದೆ. ಆದರೆ, ಬೆಂಗಳೂರಿನ ನಿರ್ಮಾತೃ ಕೆಂಪೇಗೌಡ ಯಾರು ಎಂಬ ಬಗ್ಗೆ ಇನ್ನೂ ಖಚಿತ ಮಾಹಿತಿ ಇಲ್ಲ. ಅವರ ಮೂಲ ಯಾವುದು ಎಂಬ ಬಗ್ಗೆಯೂ ಸಂಪೂರ್ಣ ಸಂಶೋಧನೆ ನಡೆದಿಲ್ಲ’ ಎಂದರು.
‘ಸತ್ಯಕ್ಕೆ ಹತ್ತಿರವಾದ ಇತಿಹಾಸ ಸಂಶೋಧನೆ ಅಧ್ಯಯನ ಪೀಠದಿಂದ ನಡೆಯಬೇಕು’ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೈ. ಎಸ್. ಸಿದ್ದೇಗೌಡ, ‘ಪ್ರಾದೇಶಿಕ ಇತಿಹಾಸ ರಚನೆಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಬೇಕು’ ಎಂದರು.
ಕುಲಸಚಿವ ಪ್ರೊ. ಕೆ. ಎನ್. ಗಂಗಾನಾಯಕ್, ಪೀಠದ ಸಂಯೋಜಕ ಡಾ. ಡಿ. ಸುರೇಶ್ ಉಪಸ್ಥಿತರಿದ್ದರು.