ತುರುವೇಕೆರೆ: ತಾಲ್ಲೂಕಿನ ದಂಡಿನಶಿವರದ ರೈತ ಹೊನ್ನೇಗೌಡ ಅವರ ಮಗ ಡಿ.ಎಚ್.ಅಶ್ವಿನ್ ಕೆಪಿಎಸ್ಸಿ ಪರೀಕ್ಷೆಯಲ್ಲಿ 27ನೇ ರ್ಯಾಂಕ್ ಪಡೆದಿದ್ದಾರೆ.
ಮಧ್ಯಮ ವರ್ಗದ ರೈತ ಕುಟುಂಬದಿಂದ ಬಂದ ಡಿ.ಎಚ್.ಅಶ್ವಿನ್ ಬಾಲ್ಯದಿಂದಲೂ ಓದಿನಲ್ಲಿ ಪ್ರತಿಭಾವಂತನಾಗಿದ್ದ. ತಂದೆ ಹೊನ್ನೇಗೌಡ ಕೃಷಿಕನಾಗಿದ್ದು ಕೃಷಿಯಿಂದ ಬರುವ ಎಲ್ಲ ಹಣವನ್ನೂ ಮಗನ ಓದುವಿಗೆ ವ್ಯಯಿಸುತ್ತಿದ್ದರು.
ಡಿ.ಎಚ್.ಅಶ್ವಿನ್ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣವನ್ನು ಅಮ್ಮಸಂದ್ರದ ಮೈಸೆಂಕೋ ಶಾಲೆಯಲ್ಲಿ ಓದಿ ತುಮಕೂರಿನ ಸಪ್ತಗಿರಿ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಬೆಂಗಳೂರಿನ ಎಂ.ಎಸ್.ರಾಮಯ್ಯ ಕೇಲೇಜಿನಲ್ಲಿ ಬಿ.ಇ ಪದವಿ ಪಡೆದಿದ್ದಾರೆ.
ಎಂಜಿನಿಯರಿಂಗ್ ಮುಗಿಯುವಾಗಲೇ ಅಂತರರಾಷ್ಟ್ರೀಯ ಕಂಪನಿಯೊಂದಕ್ಕೆ ಆಯ್ಕೆಯಾಗಿ ಜರ್ಮಿನಿಗೆ ತೆರಳುವ ಅವಕಾಶವೂ ಒದಗಿತ್ತು. ಆದರೆ ಅದನ್ನು ತಿರಸ್ಕರಿಸಿದ ಅಶ್ವಿನ್ ಗ್ರಾಮದ ಡಿ.ಚೇತನ್ ಐಎಎಸ್ನಲ್ಲಿ ತೇರ್ಗಡೆಯಾಗಿದ್ದರಿಂದ ಪ್ರಭಾವಿತರಾಗಿ ಕೆಎಎಸ್, ಐಎಎಸ್ ಪರೀಕ್ಷೆ ಬರೆಯುವ ಹಂಬಲ ಹೊತ್ತಿದ್ದರು.
ಚೆನ್ನೈನ ಹಾಗೂ ಬೆಂಗಳೂರಿನ ತರಬೇತಿ ಕೇಂದ್ರಗಳಲ್ಲಿ ಕಠಿಣ ಅಭ್ಯಾಸ ಮಾಡಿದ ಅಶ್ವಿನ್ ಈಗ್ ಉಪವಿಭಾಗಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಐಎಎಸ್ ಪರೀಕ್ಷೆ ಕೂಡ ಬರೆದಿದ್ದು ಅದರ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.