ತುಮಕೂರು: ಕಾರ್ಮಿಕರ ಗಳಿಕೆ ಪಟ್ಟಿಯಲ್ಲಿರುವ ರಜೆಗಳನ್ನು ಕಡಿತಗೊಳಿಸದೆ ಪ್ರತಿ ತಿಂಗಳ 7ನೇ ತಾರೀಕಿನಂದು ವೇತನ ನೀಡಬೇಕು, ತುಟ್ಟಿಭತ್ಯೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಸಂಘದ ಜಿಲ್ಲಾ ಘಟಕ ಹಾಗೂ ಸಿಐಟಿಯು ನೇತೃತ್ವದಲ್ಲಿ ಸಾರಿಗೆ ಸಿಬ್ಬಂದಿ ತುಮಕೂರಿನ ಕೆಎಸ್ಆರ್ಟಿಸಿ ನಿಗಮದ ಎದುರು ಸೋಮವಾರ ಪ್ರತಿಭಟಿಸಿದರು.
ಕೆಎಸ್ಆರ್ಟಿಸಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಆರ್.ದೇವರಾಜ್ ಮಾತನಾಡಿ, ‘ವೈದ್ಯಕೀಯ ವೆಚ್ಚ ಮರುಪಾವತಿ ಮಾಡಬೇಕು. ಸಾರಿಗೆ ನಿಗಮಗಳಿಗೆ ವಿದ್ಯಾರ್ಥಿ, ಮತ್ತಿತರೆ ಪಾಸುಗಳ ಬಾಬ್ತು ₹ 3 ಸಾವಿರ ಕೋಟಿ ನೀಡಬೇಕು’ ಎಂದು ಮನವಿ ಮಾಡಿದರು.
ಕೊರೊನಾ ಸೋಂಕಿನಿಂದ ನಿಧನರಾದ ಸಿಬ್ಬಂದಿಗೆ ₹ 50 ಲಕ್ಷ ವಿಮೆ ಘೋಷಿಸಬೇಕು. ಪಿಪಿಇ ಕಿಟ್ ನೀಡಬೇಕು. ಕಾರ್ಮಿಕ ವಿರೋಧಿಯಾದ ಸುತ್ತೋಲೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಸಂಘದ ಗೌರವಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿದರು. ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರ ಕುಮಾರ್ ಮತ್ತು ಎಸ್.ಒ ಲಕ್ಷ್ಮಣ್ ಅವರಿಗೆ ಮನವಿ ಸಲ್ಲಿಸಲಾಯಿತು. ಮೇಲಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಗಜೇಂದ್ರ ಕುಮಾರ್ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಮೀಉಲ್ಲಾ, ಉಪಾಧ್ಯಕ್ಷ ಕೆ.ಜಯಕುಮಾರ್, ಖಜಾಂಚಿ ಕೆ.ರಾಜಣ್ಣ, ಸಹಕಾರ್ಯದರ್ಶಿ ಪಿ.ಎನ್.ರಾಜಣ್ಣ, ಸತೀಶ್, ಪಿ.ಶಶಿಧರ್, ಖಲಂದರ್ ಇದ್ದರು.