ಕುಣಿಗಲ್: ಪಟ್ಟಣದ ಸರ್ವೋದಯ ಫ್ರೌಢಶಾಲೆ ಸತತ ಎರಡನೇ ಬಾರಿಗೆ ಶೇ 100 ಫಲಿತಾಂಶ ಪಡೆದಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಚ್.ವಿ.ನಾಗರಾಜು ತಿಳಿಸಿದ್ದಾರೆ.
ಕಳೆದ ವರ್ಷಸಹ ಶೇ 100 ಫಲಿತಾಂಶ ಪಡೆದಿದ್ದು, ನಿರಂತರವೂ ಅದೇ ಫಲಿತಾಂಶ ಪಡೆಯಲೇ ಬೇಕು ಎಂಬ ಛಲದಿಂದ ವಿದ್ಯಾರ್ಥಿಗಳಿಗೆ ಆಕರ್ಷಕ ನಗದು ಬಹುಮಾನ ನೀಡುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ ಎಂದು ಹೇಳಿದರು.
ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಮೂರು ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ನಗದು ಬಹುಮಾನ ನೀಡಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವವರೆಗೆ ತಲಾ 10 ಸಾವಿರ ನಗದು ಬಹುಮಾನ ನೀಡುವುದುದಾಗಿ ಘೋಷಿಸಲಾಗಿತ್ತು ಎಂದರು.
ಪರೀಕ್ಷೆಯಲ್ಲಿ 45 ವಿದ್ಯಾರ್ಥಿಗಳ ಪೈಕಿ 21 ಉನ್ನತ ಶ್ರೇಣಿ ಮತ್ತು 24 ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಶಿಕ್ಷಕವರ್ಗ
ಸತತ ಎರಡನೇ ಬಾರಿಗೆ ಎಸ್ಸೆಸ್ಸೆಲ್ಸಿ ಶೇ 100 ಫಲಿತಾಂಶ ಪಡೆದ ಕಾರಣ ಶಾಲೆಯ ಶಿಕ್ಷಕವರ್ಗದವರು ಪಟಾಕಿ ಸಿಡಿಸಿ ಮತ್ತು ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿ ಮತ್ತು ಪೋಷಕರಿಗೆ ಸಿಹಿ ಹಂಚಿ, ಹೂವಿನ ಹಾರಹಾಕಿ ಸಂಭ್ರಮಿಸಿದರು.
ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ವಿ.ನಾಗರಾಜು ಮಾತನಾಡಿ, ಪೋಷಕರ ಸಹಕಾರ ಮತ್ತು ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತ್ತಿದೆ. ಅಲ್ಲದೆ ಪ್ರಜಾವಾಣಿಯ ಸಹಪಾಠಿ ಸಹ ಸಾಧನೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.
ಮುಖ್ಯ ಶಿಕ್ಷಕ ಲೋಕೇಶ್, ಸಹಶಿಕ್ಷಕರಾದ ಗುರುಪ್ರಸಾಧ್, ಜಗದೀಶ್, ತುಳಸಿ, ಚೈತ್ರಾ, ಪ್ರಕಾಶ್, ವಿವೇಕ್ ರುದ್ರೇಶ್ ಇದ್ದರು.