ಕುಣಿಗಲ್: ತಾಲ್ಲೂಕಿನ 15 ಗ್ರಾಮಗಳಲ್ಲಿ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ನಡೆದಿದ್ದು, ಜಿಲ್ಲಾಧಿಕಾರಿ ಯಾವ ಗ್ರಾಮಕ್ಕೂ ಬರದಿದ್ದರೂ ತಹಶೀಲ್ದಾರ್ ನೇತೃತ್ವದಲ್ಲಿ ನಡೆದಿವೆ. ಗ್ರಾಮೀಣ ಪ್ರದೇಶದ ರೈತರ ಭೂ ದಾಖಲೆ ಸಮಸ್ಯೆ ಬಗೆಹರಿಯದೆ ಮುಂದುವರೆದಿವೆ.
ಗ್ರಾಮೀಣ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಜತೆ ಶಾಸಕರ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಡೆದಿತ್ತು. ತಾಲ್ಲೂಕಿನಲ್ಲಿ ಅಧಿಕಾರಿಗಳ ದಾಖಲೆ ಪ್ರಕಾರ 1,524 ಅರ್ಜಿ ಸ್ವೀಕರಿಸಲಾಗಿದ್ದು, 67 ಅರ್ಜಿ ಬಾಕಿ ಉಳಿದಿವೆ. 1,720 ಫಲಾನುಭವಿಗಳು ಸರ್ಕಾರಿ ಸೌಲಭ್ಯ ಪಡೆದಿದ್ದಾರೆ.
ಗ್ರಾಮೀಣ ಪ್ರದೇಶದ ಬಹುತೇಕ ಜನರಿಗೆ ಸಾಮಾಜಿಕ ಭದ್ರತೆ ಯೋಜನೆಗಳ ಸಹಾಯಧನ ಮತ್ತು ಪಡಿತರ ಚೀಟಿ ದೊರೆತಿವೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗಿದೆ. ಭೂ ದಾಖಲೆ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ನಿತ್ಯ ಕಚೇರಿಗೆ ಅಲೆದಾಟ ತಪ್ಪಿಲ್ಲ ಎನ್ನುವುದು ಗ್ರಾಮೀಣ ಪ್ರದೇಶದ ಜನರ ದೂರು.
ಆಶ್ರಯ ಯೋಜನೆ ನಿವೇಶನಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ಬೇಡಿಕೆ ನಿರಂತರವಾಗಿದೆ. ಶಾಸಕ ಡಾ.ರಂಗನಾಥ್ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಸರ್ಕಾರಿ ಜಾಗ ಗುರುತಿಸಿ ಆಶ್ರಯ ಯೋಜನೆಗೆ ಮೀಸಲಿಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ತಾಲ್ಲೂಕಿನಲ್ಲಿ ಭೂ ದಾಖಲೆ ಪಡೆಯಲು ಸಮಸ್ಯೆಯಾಗುತ್ತಿವೆ. ಪೌತಿ ವಾರಸು ಖಾತೆ, ಬಗರ್ ಹುಕುಂ ಸಾಗುವಳಿ ಚೀಟಿ, ತಿದ್ದುಪಡಿ, ಖಾತೆ ಬದಲಾವಣೆ ಮತ್ತು ಇ- ಖಾತೆಗಳಿಗಾಗಿ ಗ್ರಾಮೀಣ ಪ್ರದೇಶದ ಜನ ನಿತ್ಯ ಕಚೇರಿಗೆ ಅಲೆಯುವುದು ತಪ್ಪಿಲ್ಲ.
ತಾಲ್ಲೂಕಿನಲ್ಲಿ ಗ್ರಾಮೀಣ ಪ್ರದೇಶದ ರೈತರ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಜೊತೆ ಚುನಾವಣೆ ಪೂರ್ವದಲ್ಲಿ ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಪ್ರತಿ ಬುಧವಾರ ಜನಸ್ಪಂದನ ಕಾರ್ಯಕ್ರಮ, ಕೆಆರ್ಎಸ್ ಪಕ್ಷದಿಂದಲೂ ಜನಸ್ಪಂದನ ಕಾರ್ಯಕ್ರಮ ನಿರಂತರವಾಗಿ ನಡೆದಿತ್ತು. ಆದಾಗ್ಯೂ ಗ್ರಾಮೀಣ ಜನರ ಸಮಸ್ಯೆ ಹೆಚ್ಚಾಗಿವೆಯೇ ಹೊರತು ಕಡಿಮೆಯಾಗಿಲ್ಲ. ಕಳೆದ ವಾರ ನಡೆದ ಜಿಲ್ಲಾಧಿಕಾರಿ ಜನತಾ ದರ್ಶನ ಅರ್ಧದಿನದ ಕಾರ್ಯಕ್ರಮದಲ್ಲಿ 350 ಅರ್ಜಿ, ಲೋಕಾಯುಕ್ತ ಅಧಿಕಾರಿಗಳಿಗೆ ಸಾರ್ವಜನಿಕ ಸಮಸ್ಯೆಯ 50 ಅರ್ಜಿ ಬಂದಿವೆ. ಸಮಸ್ಯೆಗಳ ಪರಿಹಾರವೂ ನಿರಂತರವಾಗಬೇಕಾದರೆ ಅಧಿಕಾರಿ ಮತ್ತು ಜನಪ್ರತಿನಿಧಿಗಳಲ್ಲಿ ಸಮನ್ವಯತೆ ಮತ್ತು ಇಚ್ಛಾಶಕ್ತಿ ಇದ್ದಾಗ ಮಾತ್ರ ಸಾಧ್ಯ ಎನ್ನುತ್ತಾರೆ ಹಿರಿಯ ನಾಗರಿಕರು.
ವಿಲೇವಾರಿ ತಡ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಗ್ರಾಮೀಣ ಪ್ರದೇಶದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ದೇವಸಂದ್ರ ಗ್ರಾಮದ ಕಲ್ಯಾಣಮ್ಮ ಅವರಿಗೆ ಸಾಗುವಳಿ ಚೀಟಿ ನೀಡಿ 20 ವರ್ಷವಾಗಿದೆ. ದುರಸ್ತಿಗಾಗಿ ಅಲೆಯುತ್ತಿದ್ದಾರೆ. ಲೋಕಾಯುಕ್ತದ ಮೊರೆಹೋದರೂ ಪ್ರಯೋಜನವಾಗಿಲ್ಲ. ಎಲೆಕಡಕಲು ಹಿತ್ತಲಪುರ ರಸ್ತೆಗಳಿಗಾಗಿ ಮನವಿ ಮಾಡಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಜಲ್ಲಿಕಲ್ಲು ಹಾಕಿ ಮೂರು ತಿಂಗಳು ಕಳೆದಿದೆ. ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಸರ್ಕಾರಿ ಶಾಲೆ ಪಂಚಾಯಿತಿ ಕಟ್ಟಡ ಶಿಥಿಲವಾಗಿದ್ದು ಅಧಿಕಾರಿಗಳು ಗಮನಹರಿಸಿಲ್ಲ. ಕಲ್ಲುಗಣಿಗಾರಿಕೆಗೆ ಬಂದ ಅರ್ಜಿಗಳು ಶೀಘ್ರ ವಿಲೇವಾರಿಯಾಗುತ್ತಿದ್ದು ಗ್ರಾಮೀಣ ಪ್ರದೇಶದ ರೈತರ ಅರ್ಜಿಗಳು ಅಷ್ಟೇ ತಡವಾಗಿ ವಿಲೇವಾರಿಯಾಗುತ್ತಿದೆ. ಚನ್ನೇಗೌಡ ಉಜ್ಜನಿ ಪಶು ವೈದ್ಯರಿಲ್ಲ ಗ್ರಾಮದಲ್ಲಿ ಪಶು ಆಸ್ಪತ್ರೆ ಇದೆ. ಆದರೆ ಐದು ವರ್ಷಗಳಿಂದ ಪಶು ವೈದ್ಯರಿಲ್ಲ. ಜಾನುವಾರುಗಳಿಗೆ ಕಾಲುಬಾಯಿ ರೋಗ ಚರ್ಮಗಂಟು ರೋಗ ಬಂದು ಮೃತಪಟ್ಟಿದ್ದರೂ ರಾಜ್ಯದಲ್ಲೇ ಪಶು ವೈದ್ಯರ ಕೊರತೆ ಇದೆ. ಕುಣಿಗಲ್ ತಾಲ್ಲೂಕು ಇದಕ್ಕೆ ಹೊರತಲ್ಲ. ಹೊಂದಾಣಿಕೆ ಮಾಡಿಕೊಂಡು ಹೋಗಲು ಸೂಚನೆ ನೀಡುತ್ತಾರೆ. ರಾಮಣ್ಣ ಉಜ್ಜನಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.