ಗುಬ್ಬಿ: ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಇಬ್ಬರು ಒಗ್ಗೂಡಿ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವರು ಎಂದು ತುರುವೇಕೆರೆ ಕ್ಷೇತ್ರದ ಶಾಸಕ ಮಸಾಲ ಜಯರಾಂ ಹೇಳಿದರು.
ಸಿಎಸ್ ಪುರ ಹೋಬಳಿಯಲ್ಲಿರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಬಿಜೆಪಿಯಲ್ಲಿ ಎಲ್ಲವೂ ಹೈಕಮಾಂಡ್ ಆದೇಶದಂತೆ ನಡೆಯುವುದರಿಂದ ಸಚಿವ ಗಾದಿಗಾಗಿ ಶಾಸಕರು ಕಿತ್ತಾಡಲು ಅವಕಾಶವೇ ಇಲ್ಲ. ಜೆ.ಸಿ. ಮಾಧುಸ್ವಾಮಿ ಅವರು ಉಸ್ತುವಾರಿ ಸಚಿವರಾಗಿ ಮುಂದುವರೆಯುವ ನಂಬಿಕೆ ಇದೆ. ಸಚಿವರು ಜಿಲ್ಲೆಯ ಎಲ್ಲ ಕೆರೆಗಳಿಗೂ ನೀರು ತುಂಬಿಸುವ ಕಾರ್ಯ ಯೋಜನೆ ರೂಪಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ ಯೋಜನೆಗಳು ಕಾರ್ಯಗತವಾಗಲು ಮಾಧುಸ್ವಾಮಿ ಸಚಿವರಾಗಿ ಮುಂದುವರಿಯಲೇಬೇಕು ಎಂದು ಹೇಳಿದರು.
ಕಳೆದ ಬಾರಿ ಹೇಮಾವತಿ ನೀರಿನಿಂದ ಸಿಎಸ್ ಪುರ ಹೋಬಳಿಯ ಎಲ್ಲ ಕೆರೆ- ಕಟ್ಟೆಗಳನ್ನು ತುಂಬಿಸಲಾಗಿತ್ತು. ಇದರಿಂದ ಈ ಭಾಗದ ನೀರಿನ ಬವಣೆ ನೀಗಿದಂತಾಗಿದೆ ಎಂದರು.
ಸಾವಿರ ಕೋಟಿಯ ಅನುದಾನ ತಂದು ಕ್ಷೇತ್ರವನ್ನು ಮಾದರಿಯನ್ನಾಗಿಸುವ ಗುರಿ ಇದೆ. ಉಳಿದ ಎರಡು ವರ್ಷಗಳ ಅವಧಿಯಲ್ಲಿ ಅಭಿವೃದ್ಧಿಯನ್ನೇ ಮೂಲ ಮಂತ್ರವಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತೇವೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಸುಭಿಕ್ಷವಾಗಿ ಮಳೆ, ಬೆಳೆ ಆಗುತ್ತಿದೆ ಎಂದು ಹೇಳಿದರು.
ಸಿಎಸ್ ಪುರ ವಿಎಸ್ಎಸ್ಎನ್ ಅಧ್ಯಕ್ಷ ನಾಗರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಪರಾಜು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಭಾನುಪ್ರಕಾಶ್, ಮುಖಂಡ ಪಾಪು ಇದ್ದರು.