ಹಾಗಲವಾಡಿ: ಮಂಚಲದೊರೆ ದಟ್ಟಾರಣ್ಯದಲ್ಲಿನ ಲಕ್ಷ್ಮಣ ಕೆರೆ ಈ ಬಾರಿ ಸಂಪೂರ್ಣ ಬತ್ತಿದೆ. ಈ ದಟ್ಟಡವಿಯ ವನ್ಯ ಜೀವಿಗಳಿಗೆ ನೀರಿನ ಮೂಲವಾಗಿದ್ದ ಈ ಕೆರೆ ಒಣಗಿದೆ ಎಂದರೆ ಪ್ರಾಣಿಗಳು ಇನ್ನೂ ಬದುಕಿದ್ದಾವೆಯೇ ಎನ್ನುವುದು ಪ್ರಶ್ನೆಯಾಗಿದೆ.
ಕೆರೆ ಬತ್ತಿರುವುದರಿಂದ ಸಾವಿರಾರು ಎಕರೆ ಅರಣ್ಯದಲ್ಲಿನ ವನ್ಯ ಜೀವಿಗಳು ಹಾಗೂ ಪಕ್ಷಿ ಸಂಕುಲಕ್ಕೆ ನೀರಿನ ಸಮಸ್ಯೆಯಾಗಿದೆ. ಜಿಂಕೆ, ಕರಡಿ, ಮೊಲ, ಕಾಡುಹಂದಿ ಸೇರಿದಂತೆ ವಿವಿಧ ಕಾಡು ಪ್ರಾಣಿಗಳು ಹೆಚ್ಚಾಗಿವೆ. ಅವುಗಳಿಗೆ ಈ ಲಕ್ಷ್ಮಣ ಕೆರೆಯೇ ನೀರಿನ ಮೂಲವಾಗಿತ್ತು.
ಕಾಡಿನಲ್ಲಿರುವ ಬಹುತೇಕ ಕೆರೆ, ಕಟ್ಟೆ, ಗೋಕಟ್ಟೆಗಳು ಒಣಗಿ ಪ್ರಾಣಿಗಳಿಗೆ ನೀರಿನ ಹಾಹಾಕಾರ ಸೃಷ್ಟಿಯಾಗಿದೆ. ಹಾಗಾಗಿ ಪ್ರಾಣಿಗಳು ನೀರು ಅರಸಿ ನಾಡಿನತ್ತ ಮುಖಮಾಡುತ್ತಿವೆ.
ಸಾವಿರಾರು ಎಕರೆ ವಿಸ್ತೀರ್ಣದಲ್ಲಿರುವ ಕಾಡಿನ ಮಧ್ಯೆ ಐದು ಎಕರೆ ವಿಸ್ತೀರ್ಣದ ಲಕ್ಷಣ ಕೆರೆ ಇದೆ. ಎಂದೂ ಬತ್ತದ ಈ ಕೆರೆ, ಈ ಬಾರಿ ಬತ್ತಿರುವುದರಿಂದ ಅಲ್ಲಿನ ಪ್ರಾಣಿ, ಪಕ್ಷಿಗಳ ಸಂಕುಲಕ್ಕೆ ನೀರಿನ ತತ್ವಾರ ಹೆಚ್ಚಿದೆ. ಅಲ್ಲಿನ ಅದೆಷ್ಟೊ ಪ್ರಾಣಿಗಳು ನೀರಿಲ್ಲದೆ ಕಾಡುಬಿಟ್ಟಿರಬಹುದು. ಕಾಡಿನಲ್ಲಿರುವ ಕೆಲ ಪ್ರಾಣಿಗಳು ನಾಡಿಗೆ ಬರುವ ಮೊದಲು ಅರಣ್ಯ ಇಲಾಖೆಯವರು ನೀರಿನ ವ್ಯವಸ್ಥೆ ಮಾಡಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.