ಚಿಕ್ಕನಾಯಕನಹಳ್ಳಿ: ಚಿರತೆ ದಾಳಿಯಿಂದಾಗಿ ಮದನಮಡು ಗ್ರಾಮದ ಮೂಡ್ಲಯ್ಯ ಎಂಬುವವರು ತೀವ್ರ ಗಾಯಗೊಂಡಿದ್ದಾರೆ.
ಅವರು ಮದನಮಡು ಗ್ರಾಮದ ಸೀಡ್ಯಕೆರೆ ಬಳಿ ಕುರಿ ಮೇಯಿಸುತ್ತಿದ್ದಾಗೆ ಚಿರತೆ ದಾಳಿ ಮಾಡಿದೆ. ತಲೆ, ಕಿವಿಗಳಿಗೆ ಗಾಯಗಳಾಗಿವೆ. ಮೂಡ್ಲಯ್ಯ ಅವರ ಕಿರುಚಾಟಕ್ಕೆ ಅಕ್ಕಪಕ್ಕದ ತೋಟದವರು ಬರುವುದನ್ನು ಕಂಡ ಚಿರತೆ ಓಡಿ ಹೋಗಿದೆ. ತೀವ್ರವಾಗಿ ಗಾಯಗೊಂಡ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಕಂದಿಕೆರೆ ಭಾಗದ ಹಲವು ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ ಎಂದು ಹಲವು ಬಾರಿ ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ. ಆದರೂ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡಿಲ್ಲ, ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಇಟ್ಟು ಚಿರತೆ ಸೆರೆಹಿಡಿಯಬೇಕು ಎಂದು ಆಸ್ಪತ್ರೆಗೆ ಭೇಟಿ ನೀಡಿದ ಡಿಎಸ್ಎಸ್ ಮುಖಂಡ ಬೇವಿನಹಳ್ಳಿ ಚನ್ನಬಸವಯ್ಯ ಆಗ್ರಹಿಸಿದ್ದಾರೆ.
ಡಿಎಸ್ಎಸ್ ಮುಖಂಡರಾದ ಗೋ.ನಿ.ವಸಂತ್ ಕುಮಾರ್, ಜೆ.ಸಿ.ಪುರ ಗೋವಿಂದರಾಜು, ಎಸ್.ಎಸಿ.ಎಸ್.ಟಿ ನೌಕರರ ಸಮನ್ವಯ ಸಮಿತಿಯ ಮಂಜುನಾಥ್, ಚಂದ್ರಶೇಖರ್ ಇದ್ದರು.