ತುಮಕೂರು: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೌಶಲ್ಯಾಧಾರಿತ ಶಿಕ್ಷಣ ಅನಿವಾರ್ಯ ಎಂದು ಬೆಳಗಾವಿ ರಾಣಿಚನ್ನಮ್ಮ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ರಾಮಚಂದ್ರ ಗೌಡ ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಹೊಸದಾಗಿ ಆರಂಭಿಸಲಾಗಿರುವ ಎಂ.ಕಾಂ (ಇನ್ಫಾರ್ಮೇಷನ್ ಸಿಸ್ಟಮ್) ಹೊಸ ಕೋರ್ಸ್ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ವ್ಯವಸ್ಥೆಯಲ್ಲಿರುವ ಕೋರ್ಸ್ಗಳು ಕೇವಲ ಸರ್ಟಿಫಿಕೇಟ್ ನೀಡಲು ಸೀಮಿತವಾಗಿವೆ. ವೃತ್ತಿ ಜೀವನಕ್ಕೆ ಅವಶ್ಯವಾಗಿರುವ ಕೌಶಲ್ಯಗಳನ್ನು ನೀಡುತ್ತಿಲ್ಲ ಎಂದರು.
ನಮ್ಮ ವಿಶ್ವವಿದ್ಯಾನಿಲಯಗಳಿಂದ ಪದವಿ ಪಡೆದು ಹೊರಬರುತ್ತಿರುವವರಲ್ಲಿ ಶೇ 10ರಷ್ಟು ಜನರು ಮಾತ್ರ ಉದ್ಯೋಗ ಪಡೆಯಲು ಅರ್ಹರಾಗಿದ್ದಾರೆ. ಈ ನಿಟ್ಟಿನಲ್ಲಿ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಆರಂಭವಾಗಿರುವ ನೂತನ ಕೋರ್ಸ್ ತನ್ನ ಪ್ರಾಯೋಗಿಕ ಆಯಾಮಗಳಿಂದ ಸಹಕಾರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವೈ ಎಸ್ ಸಿದ್ದೇಗೌಡ ಮಾತನಾಡಿ, ’ನಮ್ಮ ಕೈಗೆಟುಕುವ ಸಂಪನ್ಮೂಲಗಳನ್ನು ಬಳಸಿಕೊಂಡೇ ನಮ್ಮ ಗುರಿ ಸಾಧಿಸಲು ಸಾಧ್ಯವಿದೆ’ ಎಂದರು.
ಕುಲಸಚಿವ ಪ್ರೊ. ಕೆ. ಎನ್. ಗಂಗಾ ನಾಯಕ್, ಹಣಕಾಸು ಅಧಿಕಾರಿ ಪ್ರೊ. ಪಿ.ಪರಮಶಿವಯ್ಯ, ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಬಿ.ಶೇಖರ್, ಪ್ರಾಧ್ಯಾಪಕ ಡಾ.ಜಿ.ಸುದರ್ಶನ ರೆಡ್ಡಿ, ಕೋರ್ಸ್ ಸಂಯೋಜಕ ಡಾ.ಎಸ್.ದೇವರಾಜಪ್ಪ ಇದ್ದರು.