ತುಮಕೂರು: ‘ಪ್ರತಿಯೊಬ್ಬರೂ ಪರಿಸರ ಕಾಳಜಿ ಮೆರೆಯಬೇಕು. ಅಮೂಲ್ಯವಾದ ಅರಣ್ಯ ಸಂಪತ್ತು ಸಂರಕ್ಷಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ಸಿದ್ಧಗಂಗಾ ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ ತಿಳಿಸಿದರು.
ರೋಟರಿ ತುಮಕೂರು ಸಿಟಿ ಘಟಕದ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದರು.
‘ಮಳೆಯ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಅಂತರ್ಜಲ ಕುಸಿತವಾಗಿದೆ. ಕುಡಿಯುವ ನೀರಿಗೂ ಪರಿತಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಹೇಳಿದರು.
‘ಪರಿಸರ ನಾಶ, ಮಾಲಿನ್ಯದಿಂದ ಭೂಮಿಯಲ್ಲಿ ತಾಪಮಾನ ಏರಿಕೆಯಾಗುತ್ತಿದೆ. ಪರಿಸರ ಕಾಳಜಿ ಪ್ರಜ್ಞೆ ಮೂಡಿಸಬೇಕು. ಶಿಕ್ಷಣಕ್ಕೆ ಒತ್ತು ಕೊಡಬೇಕು’ ಎಂದರು.
ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧನೆ ಮಾಡಿದ ತುಮಕೂರು ರೋಟರಿ ಜಿಲ್ಲಾ ಗವರ್ನರ್ ಎಚ್.ಕೆ.ವಿ.ರೆಡ್ಡಿ, ‘ಪ್ರಾಮಾಣಿಕ ಸೇವೆಯೇ ಸಂಸ್ಥೆಯ ಮೂಲ ತತ್ವವಾಗಿದೆ. ಈ ವರ್ಷದ ರಾಷ್ಟ್ರಮಟ್ಟದಲ್ಲಿ ಕೋಟಿ ನಾಟಿ ಎಂಬ ಬೃಹತ್ ಪರಿಸರ ಯೋಜನೆ ಹಾಕಿಕೊಳ್ಳಲಾಗಿದೆ. ಸಾಧ್ಯವಿರುವ ಕಡೆಯಲ್ಲೆಲ್ಲ ಗಿಡಗಳನ್ನು ನೆಡುವ ಯೋಜನೆ ಇದಾಗಿದೆ’ ಎಂದು ಹೇಳಿದರು.
ನೂತನ ಅಧ್ಯಕ್ಷ ವಿ.ಎಸ್.ಕೆ.ಸ್ವಾಮಿ ಮಾತನಾಡಿ, ‘ರೋಟರಿ ಸಂಸ್ಥೆ 11ನೇ ವರ್ಷಕ್ಕೆ ಕಾಲಿಟ್ಟಿದೆ. ಸಂಸ್ಥೆಯ ಸೇವಾ ಗುರಿಯನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಹಲವಾರು ಜನಪರ ಕೆಲಸಗಳನ್ನು ಮಾಡುವ ಗುರಿ ಹಾಕಿಕೊಳ್ಳಲಾಗಿದೆ’ ಎಂದು ತಿಳಿಸಿದರು.
ಡಾ.ಎಂ.ಎನ್.ಚನ್ನಬಸಪ್ಪ ಅವರಿಗೆ ವಿಶೇಷ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಸಿಗಳನ್ನು ನೆಡಲಾಯಿತು.
ರೋಟರಿ ಅಧ್ಯಕ್ಷ ವಿ.ಎಸ್.ಕೆ.ಸ್ವಾಮಿ, ಕಾರ್ಯದರ್ಶಿ ಜಯಪ್ಪ, ಪ್ರವೀಣ್ ಷಾ, ಸುರೇಂದ್ರ ಷಾ, ಕೆ.ಜಿ.ಶಿವಕುಮಾರ್, ಜಿ.ವಿ.ಸಚಿನ್, ಬಿ.ಆರ್.ರಮೇಶ್, ರವೀಶ್ಕುಮಾರ್ ಮತ್ತು ರೋಟರಿ ಎಲ್ಲಾ ಸದಸ್ಯರು ಹಾಜರಿದ್ದರು.