ಮಧುಗಿರಿ: ತಾಲ್ಲೂಕು ಪುರವರ ಹೋಬಳಿಯ ಸಂಕಾಪುರ ಗ್ರಾಮದ ಅಂಗನವಾಡಿ ಕೇಂದ್ರದ ಆಹಾರ ಸೇವಿಸಿ 7 ಮಕ್ಕಳು ಹಾಗೂ ಅಂಗನವಾಡಿ ಕಾರ್ಯಕರ್ತೆ ಅಸ್ವಸ್ಥಗೊಂಡು ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳವಾರ ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಅವರು ಮಕ್ಕಳಿಗೆ ಚಿತ್ರಾನ್ನ, ಕಾಳು ಹಾಗೂ ಪಾಯಸ ಬಡಿಸಿದ್ದಾರೆ. ಅವರೂ ಆ ಆಹಾರ ಸೇವಿಸಿದ್ದಾರೆ. ಸಂಜೆ ಅವರಿಗೆ ಮತ್ತು ಮಕ್ಕಳಾದ ನರಸಿಂಹಮೂರ್ತಿ, ಲಕ್ಷಿತ್, ದಿವ್ಯಶ್ರೀ, ಚೈತ್ರಾ, ಪವನ್, ಚೇತನ್, ನರಸಿಂಹನಿಗೆ ವಾಂತಿ ಆಗಿದೆ.
ಎಲ್ಲರೂ ಆಸ್ಪತ್ರೆಯಲ್ಲಿ ಎರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರ್ದೇಶಕ ನಟರಾಜ, ಸಿಡಿಪಿಒ ಟಿ.ಆರ್.ಸ್ವಾಮಿ ಆಸ್ಪತ್ರೆಗೆ ಭೇಟಿ ನೀಡಿದ್ದರು.