ಮಧುಗಿರಿ: ಪುರಸಭೆ ಇಲಾಖೆ ಸರಬರಾಜು ಮಾಡುವ ನಳದಲ್ಲಿ ಕೊಳಚೆ ಮಿಶ್ರಿತ ನೀರು ಪೂರೈಕೆಯಾಗುತ್ತಿದೆ. ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಚೌಡೇಶ್ವರಿ ಗುಡಿಬೀದಿ ಹಾಗೂ ಸಂಪಿಗೆ ಬೀದಿಯಲ್ಲಿ ಹಲವು ದಿನಗಳಿಂದ ನಳದಲ್ಲಿ ಕೊಳಚೆ ಮಿಶ್ರಿತ ನೀರು ಸರಬರಾಜು ಮಾಡಲಾಗುತ್ತಿದೆ. ಈ ನೀರಿನಲ್ಲಿ ಹುಳು ಕೂಡ ಬರುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಇಲ್ಲಿನ ನಿವಾಸಿಗಳು ಶುದ್ಧ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
70ಕ್ಕೂ ಅಧಿಕ ನಳಗಳಲ್ಲಿ ಚರಂಡಿ ನೀರು ಮಿಶ್ರಿತ ನೀರಿನೊಂದಿಗೆ ಹುಳು ಬರುತ್ತಿದೆ. ಹಲವು ದಿನಗಳಿಂದ ಇದೇ ರೀತಿ ಕೊಳಚೆ ಮಿಶ್ರಿತ ನೀರು ಪೂರೈಕೆಯಾಗುತ್ತಿದೆ. ತಕ್ಷಣ ಪುರಸಭೆ ಅಧಿಕಾರಿಗಳು ಗಮನ ಹರಿಸಬೇಕು. ಇಲ್ಲದಿದ್ದರೆ ಪುರಸಭೆ ಮುಂಭಾಗ ಪ್ರತಿಭಟನೆ ಮಾಡುವುದಾಗಿ ನಿವಾಸಿಗಳು ಎಚ್ಚರಿಕೆ ನೀಡಿದರು.