ತುಮಕೂರು: ಚಿತ್ರದುರ್ಗದಲ್ಲಿಜ.5 ಮತ್ತು 6 ರಂದು ನಡೆಯುವ ಮಡಿವಾಳ ಜನಾಂಗದ ಜಾಗೃತಿ ಮಹಾ ಸಮ್ಮೇಳನ ಮತ್ತು ಬಸವ ಮಾಚಿದೇವ ಮಹಾ ಸ್ವಾಮಿಗಳ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಸುಮಾರು 60 ಸಾವಿರ ಮಡಿವಾಳ ಜನಾಂಗದವವರು ಭಾಗವಹಿಸಲಿದ್ದಾರೆ ಎಂದು ಕುಲಕಸುಬುದಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.6ರ ಬೆಳಿಗ್ಗೆ 7 ಕ್ಕೆ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಿಂದ ವಾಹನಗಳ ಮೂಲಕ ಚಿತ್ರದುರ್ಗಕ್ಕೆ ತೆರಳಲಿದ್ದೇವೆ ಎಂದು ಹೇಳಿದರು.
ಈ ಕಾರ್ಯಕ್ರಮದ ಮೂಲಕ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿ (ಎಸ್ಸಿ) ಪಟ್ಟಿಗೆ ಸೇರಿಸಬೇಕು. ಪ್ರತ್ಯೇಕ ಮಡಿವಾಳ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮತ್ತೊಮ್ಮೆ ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದರು.
ಮಡಿವಾಳ ಜನಾಂಗವು ಒಟ್ಟಾರೆ ಸೇರಿ ಶೇ 8 ರಷ್ಟು ಜನ ಸರ್ಕಾರಿ, ಇತರೆ ನೌಕರಿಯಲ್ಲಿದ್ದಾರೆ. ಇನ್ನು ಶೇ 98 ರಷ್ಟು ಜನ ಇಂದಿಗೂ ಕುಲಕಸುಬು ಮಾಡುತ್ತಿದ್ದಾರೆ. ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಈ ಸಮುದಾಯದ ಅಭಿವೃದ್ಧಿಗೆ ₹ 280 ಕೋಟಿ ಅನುದಾನ ಮತ್ತು ಸಿ.ಎ.ನಿವೇಶಗಳನ್ನು ನೀಡಲಾಗುತ್ತದೆ. ಆದರೆ ಕರ್ನಾಟಕದಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ ಎಂದು ಆರೋಪಿಸಿದರು.
ಮಡಿವಾಳ ಸಮುದಾಯದ ಕೃಷ್ಣಮೂರ್ತಿ, ದೇವೇಂದ್ರ, ಪಾಲಿಕೆ ಸದಸ್ಯ ವಿಷ್ಣುವರ್ಧನ, ಆನಂದಮೂರ್ತಿ, ಕೆಂಪರಾಮಯ್ಯ, ಯತೀಶ್, ವೆಂಕಟರಾಮಯ್ಯ, ಕೆಂಪನರಸಯ್ಯ, ಶ್ರೀನಿವಾಸ್, ಚಿಕ್ಕಣ್ಣ ಹಾಗೂ ಕುಣಿಗಲ್ ರಾಜಣ್ಣ ಇದ್ದರು.