ಗುಬ್ಬಿ: ಲಾಕ್ಡೌನ್ನಿಂದಾಗಿ ಮಡಿವಾಳ ಸಮುದಾಯದ ಜನರಿಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಎಲ್ಲರಿಗೂ ಸರ್ಕಾರ ಸಹಾಯಧನ ನೀಡಬೇಕು ಎಂದು ಗುರು ಮಡಿವಾಳ ಮಾಚಿದೇವರ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮತ್ತು ಪಪಂ ಸದಸ್ಯ ರೇಣುಕಾ ಪ್ರಸಾದ್ ಒತ್ತಾಯಿಸಿದರು.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು. ಸರ್ಕಾರ ಈಗಾಗಲೇ ಘೋಷಿಸಿರುವ ಆರ್ಥಿಕ ಪ್ಯಾಕೇಜ್ನಲ್ಲಿ 60 ಸಾವಿರ ಮಂದಿಗೆ ಮಾತ್ರ ನೆರವು ನೀಡುವುದಾಗಿ ಹೇಳಿದೆ. ಫಲಾನುಭವಿಗಳು ಕಡ್ಡಾಯವಾಗಿ ಕೆಲ ಮಾನದಂಡ ಈಡೇರಿಸಬೇಕು ಎಂದು ಹೇಳಿರುವುದರಿಂದ ಸಾವಿರಾರು ಜನ ಅನುದಾನದಿಂದ ವಂಚಿತರಾಗುತ್ತಾರೆ. ಹಾಗಾಗಿ ಷರತ್ತುಗಳನ್ನು ಸಡಿಲಗೊಳಿಸಿ ಎಲ್ಲರಿಗೂ ಆಸರೆಯಾಗಬೇಕು ಎಂದರು.
ಮಡಿವಾಳ ಸಮುದಾಯದ ಕುಲಕಸುಬು ನಡೆಸುವವರು ಬಟ್ಟೆ ಸ್ವಚ್ಛಗೊಳಿಸುವ, ಇಸ್ತ್ರಿ ಮಾಡುವ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಇಂತಹ ಸಮಯದಲ್ಲಿ ಅಂಗಡಿ ಪರವಾನಗಿ ಸಲ್ಲಿಸಬೇಕೆಂದಿರುವ ನಿಯಮ ಸಮಂಜಸವಲ್ಲ. ಮನೆಯಲ್ಲೇ ಕುಲಕಸುಬು ನಡೆಸುವವರಿಗೆ ಯಾವುದೇ ಪರವಾನಗಿ ಇರುವುದಿಲ್ಲ ಅವರು ಹೇಗೆ ಅರ್ಜಿ ಸಲ್ಲಿಸಲು ಸಾಧ್ಯ ಎಂದರು.
ಸೇವಾಸಿಂಧು ಆ್ಯಪ್ ಮೂಲಕ ಟ್ಯಾಕ್ಸಿ ಚಾಲಕರಿಗೆ ಅರ್ಜಿ ಸಲ್ಲಿಸಲು ಸೂಚಿಸಿರುವ ಮಾದರಿಯಲ್ಲೇ ನಮಗೂ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಗುರು ಮಡಿವಾಳ ಮಾಚೀದೇವರ ಸಂಘದ ತಾಲ್ಲೂಕು ಅಧ್ಯಕ್ಷ ಪರಮೇಶ್ವರ್, ಖಜಾಂಚಿ ಮೋಹನ್, ಪದಾಧಿಕಾರಿಗಳಾದ ಚನ್ನಕೃಷ್ಣಯ್ಯ, ನಾಗರಾಜು ಇದ್ದರು.