ತುಮಕೂರು: ಪಾವಗಡ ತಾಲ್ಲೂಕಿನಲ್ಲಿ ಮಟ್ಕಾ ದಂಧೆ ಹೆಚ್ಚಿದೆ. ಇದು ಸಾಮಾಜಿಕ ಪಿಡುಗು ಎನ್ನುವಂತೆ ಆಗಿದೆ. ಶೇ 100ರಷ್ಟು ಮಟ್ಕಾ ನಿಯಂತ್ರಣಕ್ಕೆ ಇಲಾಖೆ ಮುಂದಾಗಿದೆ. ಆದರೂ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರು ಮತ್ತು ಸಮಾಜದ ಸಹಕಾರದಿಂದ ಮಾತ್ರ ಈ ಪಿಡುಗು ನಿಯಂತ್ರಿಸಬಹುದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಟ್ಕಾ ದಂಧೆಯಲ್ಲಿ ಪೊಲೀಸರು ಭಾಗಿಯಾಗಿದ್ದಾರೆ ಎನ್ನುವ ದೂರುಗಳು ಸಹ ಬಂದಿತ್ತು. ಅಂತಹವರನ್ನು ಬೇರೆ ಕಡೆಗೆ ವರ್ಗಾಯಿಸಲಾಗಿದೆ. ದುಡಿಮೆಯ ಬಹುಪಾಲು ಹಣವನ್ನು ಪುರುಷರು ಈ ದಂಧೆಗೆ ವ್ಯಯಿಸುತ್ತಿದ್ದಾರೆ. ಮಹಿಳೆಯರಲ್ಲಿ ಇಲಾಖೆ ಈ ಕುರಿತು ಜಾಗೃತಿ ಮೂಡಿಸಲಿದೆ. ಸಮಾಜವೂ ಈ ಬಗ್ಗೆ ಎಚ್ಚರವಹಿಸಬೇಕು’ ಎಂದರು. ಜಾಲತಾಣಗಳಲ್ಲಿ ಯುವ ಸಮುದಾಯ ‘ಮಟ್ಕಾ ನಿಲ್ಲಿಸಿ ಪಾವಗಡ ಉಳಿಸಿ’ ಅಭಿಯಾನ ನಡೆಸುತ್ತಿರುವುದನ್ನು ಪ್ರಶಂಸಿಸಿದರು.
ಕೊಲೆ ಆರೋಪಿ ಬಂಧನ: ಜೂ.16ರಂದು ತುಮಕೂರು ತಾಲ್ಲೂಕಿನ ಸೋಮಸಾಗರ ಗೇಟ್ ಬಳಿ ಸುಟ್ಟ ಸ್ಥಿತಿಯಲ್ಲಿ ಶವ ದೊರೆತಿದ್ದು ಈ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಅವರು ವಿವರಿಸಿದರು.
‘ಚಳ್ಳಕೆರೆ ತಾಲ್ಲೂಕಿನ ಹೊನ್ನೂರಿನ ತಿಪ್ಪೇಸ್ವಾಮಿ ಹಾಗೂ ಬೆಂಗಳೂರಿನ ಸಂಗೀತ ಬಂಧಿತ ಆರೋಪಿಗಳು. ಕೊಲೆಯಾದ ನಾಗಾನಂದ ಹಾಗೂ ತಿಪ್ಪೇಸ್ವಾಮಿ ಸ್ನೇಹಿತರಾಗಿದ್ದರು. ನಾಗಾನಂದ ಅವರ ಪತ್ನಿ ಸಂಗೀತ ಜತೆ ತಿಪ್ಪೇಸ್ವಾಮಿ ಅಕ್ರಮ ಸಂಬಂಧ ಹೊಂದಿದ್ದ. ನಾಗಾನಂದ ಈ ಸಂಬಂಧಕ್ಕೆ ಅಡ್ಡಿ ಬರುತ್ತಾರೆ ಎಂದು ಆರೋಪಿಗಳು ಕೊಲೆಗೆ ಸಂಚು ರೂಪಿಸಿದ್ದರು. ಊರಿಗೆ ಹೋಗೋಣ ಎಂದು ಅವರನ್ನು ಕರೆದುಕೊಂಡು ಬಂದು ಮದ್ಯ ಕುಡಿಸಿ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ. ಗುರುತು ದೊರೆಯದಂತೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟಿದ್ದಾರೆ’ ಎಂದು ತಿಳಿಸಿದರು.
ತುಮಕೂರು ಗ್ರಾಮಾಂತರ ಸಿಪಿಐ ಜಿ.ಕೆ.ಮಧುಸೂದನ್, ಕೋರಾ ಠಾಣೆ ಎಸ್ಐ ರವಿಕುಮಾರ್, ಸಿಬ್ಬಂದಿಗಳಾದ ಶಾಂತಕುಮಾರ್, ಪ್ರಸನ್ನಕುಮಾರ್, ವೆಂಕಟೇಶ್ ಹಾಗೂ ರಮೇಶ್ ಕಾರ್ಯಚರಣೆಯ ತಂಡದಲ್ಲಿ ಇದ್ದರು ಎಂದು ಹೇಳಿದರು.
330 ಗ್ರಾಂ ಚಿನ್ನವಶ: ನಗರದ ವಿವಿಧ ಬಡಾವಣೆಗಳಲ್ಲಿ ಕಳ್ಳತನ ಹಾಗೂ ಸರಗಳ್ಳತನ ಮಡಿದ ಆರೋಪದ ಮೇಲೆ ತುಮಕೂರಿನ ಸತೀಶ್, ಮಂಜುನಾಥ್ ಹಾಗೂ ಗುಬ್ಬಿ ತಾಲ್ಲೂಕು ಕುಂದರನಹಳ್ಳಿ ಕಾಲೊನಿಯ ಮಂಜುನಾಥ್ ಅವರನ್ನು ಬಂಧಿಸಲಾಗಿದೆ. 331 ಗ್ರಾಂ ಚಿನ್ನ, ಅರ್ಥ ಕೆ.ಜಿ ಬೆಳ್ಳಿ ಹಾಗೂ 11 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ತಿಲಕ್ ಪಾರ್ಕ್ ಸಿಪಿಐ ರಾಧಾಕೃಷ್ಣ, ಪಿಎಸ್ಐ ನವೀನ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದರು. ಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾ ರಾಣಿ, ಡಿವೈಎಸ್ಪಿ ಸೂರ್ಯನಾರಾಯಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.