ಮಧುಗಿರಿ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ಸಂಜೆ ಸುರಿದ ಮಳೆಯಿಂದಾಗಿ ಜಮೀನು ಹಾಗೂ ತಗ್ಗು ಪ್ರದೇಶಗಳಲ್ಲಿ ನೀರು ಹರಿದಿದೆ.
ವರಮಹಾಲಕ್ಷ್ಮಿ ಹಬ್ಬದ ದಿನದಂದು ಸಂಜೆ ಸುರಿದ ಮಳೆಗೆ ಭೂಮಿ ಸಂಪೂರ್ಣ ತೇವಾಂಶವಾಗಿ ಕಾಲುವೆ, ಹಳ್ಳ ಹಾಗೂ ಕೆರೆಗಳಿಗೆ ನೀರು ಹರಿದಿದೆ.
ಪಟ್ಟಣದ ಮಹಾತ್ಮಗಾಂಧಿ ಬಡಾವಣೆ, ಕೆ.ಆರ್.ಬಡಾವಣೆ, ಪಿಎಲ್ಡಿ ಬ್ಯಾಂಕ್ ರಸ್ತೆ, ಕರಡಿಪುರ ಸೇರಿದಂತೆ ಹಲವು ಬಡಾವಣೆಯ ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ಚರಂಡಿಗಳಲ್ಲಿ ನೀರು ತುಂಬಿ ರಸ್ತೆ ಮೇಲೆ ಹರಿದ್ದರಿಂದ ಪಾದಚಾರಿ ಹಾಗೂ ವಾಹನ ಸವಾರರಿಗೆ ಸಾಕಷ್ಟು ತೊಂದರೆಯಾಯಿತು.
ಮಳೆ ಬಂದು ಹಲವು ದಿನಗಳು ಕಳೆದಿದ್ದವು. ಈ ಮಳೆಯಿಂದಾಗಿಶೇಂಗಾ, ಅವರೆ, ಅಲಸಂದೆ, ರಾಗಿ ಸೇರಿದಂತೆ ಹಲವು ಬೆಳೆಗಳಿಗೆ ಜೀವ ಕಳೆ ಬಂದಂತಾಗಿದೆ.
ಹುಳಿಯಾರು: ಹದ ಮಳೆ
ಹುಳಿಯಾರು: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಶುಕ್ರವಾರ ಸಂಜೆ ಹದ ಮಳೆಯಾಗಿದೆ.
ಬೆಳಿಗ್ಗೆಯಿಂದ ಬಿಸಿಲ ಝಳ ಹೆಚ್ಚಾಗಿದ್ದು, ಸಂಜೆ ವೇಳೆ ಮಳೆ ಬಂದು ತಂಪೆರೆಯಿತು. ಯಳನಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮ್ಮಡಿಹಳ್ಳಿ ಸುತ್ತ ಮುತ್ತ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಬಂತು.
ಇದರಿಂದ ತಗ್ಗು ಪ್ರದೇಶಗಳಿಗೆ ನೀರು ಹರಿಯಿತು. ಕೆಲ ಕಡೆ ತೆಂಗಿನ ತೋಟಗಳಲ್ಲಿ ನೀರು ಶೇಖರಣೆಯಾಗಿತ್ತು. ಉಳಿದಂತೆ ದಸೂಡಿ, ಗಾಣಧಾಳು, ಕೆಂಕೆರೆ, ಹುಳಿಯಾರು ಪಟ್ಟಣದ ಸುತ್ತಮುತ್ತ ಹದ ಮಳೆಯಾಯಿತು.