ಕುಣಿಗಲ್: ‘ತಾವು ಮತ್ತು ಸಂಸದ ಡಿ.ಕೆ. ಸುರೇಶ್ ಅಧಿಕಾರಾವಧಿಯಲ್ಲಿ ತಾಲ್ಲೂಕಿಗೆ ನೀರಾವರಿ ವಿಷಯದಲ್ಲಿ ಅನ್ಯಾಯವಾಗಲು ಬಿಡುವುದಿಲ್ಲ’ ಎಂದು ಶಾಸಕ ಡಾ.ರಂಗನಾಥ್ ಹೇಳಿದರು.
ಮಾರ್ಕೋನಹಳ್ಳಿ ಜಲಾಶಯ ಭರ್ತಿಯಾಗಿದ್ದು ಕೋಡಿ ಬಿದ್ದ ಹಿನ್ನೆಲೆಯಲ್ಲಿ ಗಂಗಾಪೂಜೆ ಮತ್ತು ಬಾಗಿನ ಅರ್ಪಿಸಿದ ಬಳಿಕ ಅವರು ಮಾತನಾಡಿದರು.
ಮಾರ್ಕೋನಹಳ್ಳಿ ಜಲಾಶಯದ ಕೋಡಿ ಹರಿಯುತ್ತಿದ್ದು, 14 ಸಾಲುಕೆರೆಗಳನ್ನು ತುಂಬಿಸಲಾಗುತ್ತಿದೆ. ಈ ಜಲಾಶಯದಿಂದ ನಾಗಮಂಗಲಕ್ಕೆ ನೀರು ತೆಗೆದುಕೊಂಡು ಹೋಗಬೇಕಾದರೆ ಹೆಚ್ಚುವರಿ ನೀರನ್ನು ಹಂಚಿಕೆ ಮಾಡಿ ಹರಿಸಿಕೊಳ್ಳಲು ಅಭ್ಯಂತರವಿಲ್ಲ ಎಂದರು.
ಜಲಾಶಯದ ಪಕ್ಕದಲ್ಲಿರುವ ಮಂಗಳ ಜಲಾಶಯಕ್ಕೆ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ. ಮಾರ್ಕೋನಹಳ್ಳಿ ಮತ್ತು ಮಂಗಳ ಜಲಾಶಯವನ್ನು ಸಂಪರ್ಕಿಸುವ ಕಾಲುವೆ ನಿರ್ಮಾಣಕ್ಕಾಗಿ ಡಿ.ಕೆ. ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದಾಗ ₹ 5 ಕೋಟಿ ಬಿಡುಗಡೆಗೆ ಮಾಡಲಾಗಿತ್ತು. ಬಿಜೆಪಿ ಸರ್ಕಾರ ಈ ಅನುದಾನವನ್ನು ತಡೆಹಿಡಿದಿದೆ. ಮತ್ತೆ ₹ 8 ಕೋಟಿ ಮೊತ್ತದ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಮಾರ್ಕೋನಹಳ್ಳಿ- ಮಂಗಳ ಜಲಾಶಯ ಸಂಪರ್ಕ ಕಾಲುವೆ ಮತ್ತು ಕುಣಿಗಲ್ ದೊಡ್ಡಕೆರೆಗೆ ನೇರವಾಗಿ ನೀರು ಹರಿಸಬೇಕಿದೆ. ಈ ಸಂಬಂಧ ಸಂಪರ್ಕ ಕಾಲುವೆಯ ಕಾಮಗಾರಿಗೆ ಆಗ್ರಹಿಸಿ ಮುಂದಿನ ದಿನಗಳಲ್ಲಿ ಕುಣಿಗಲ್ನಿಂದ ಮುಖ್ಯಮಂತ್ರಿಯ ನಿವಾಸದವರೆಗೆ ಪಾದಯಾತ್ರೆ ನಡೆಸಲಾಗುವುದು. ಇದಕ್ಕೆ ತಾಲ್ಲೂಕಿನ ಜನತೆಯ ಸಹಕಾರ ಬೇಕಾಗಿದೆ ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯ ರಾಜು, ಮುಖಂಡರಾದ ಹರೀಶ್, ಪಾಪಣ್ಣ, ಪುರಸಭೆ ಸದಸ್ಯರು ಹಾಜರಿದ್ದರು.