ತುಮಕೂರು: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ನಗರದ ಹನುಮಂತಪುರದಲ್ಲಿ ಸಂಚಾರಿ ಮಾಂಸ ಮಾರಾಟ ಮಳಿಗೆಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಂಗಳವಾರ ಚಾಲನೆ ನೀಡಿದರು.
ಉತ್ತಮ ಗುಣಮಟ್ಟದ ಮಾಂಸವನ್ನು ನೇರವಾಗಿ ಜನರಿಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ವೈದ್ಯರು ಹೇಳುವಂತೆ ಕೊರೊನಾ ವೈರಸ್ ತಡೆಯಲು ದೇಹಕ್ಕೆ ಪ್ರೋಟಿನ್ ಅಂಶ ಬೇಕು. ಗುಣಮಟ್ಟದ ಮಾಂಸ ಮಾರಾಟ ವ್ಯವಸ್ಥೆ ಮಾಡಲಾಗಿದೆ. ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಮಾಂಸವನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಶಾಸಕರು ತಿಳಿಸಿದರು.
ಮಹಾನಗರ ಪಾಲಿಕೆ ಮೇಯರ್ ಫರೀದಾ ಬೇಗಂ ಮಾತನಾಡಿ, ‘ಮನೆ ಬಾಗಿಲಿಗೆ ಮಾಂಸ ತಲುಪಿಸುವ ಉದ್ದೇಶದಿಂದ ಸಂಚಾರಿ ಮಳಿಗೆ ತೆರೆಯಲಾಗಿದೆ. ಜನರು ಫೋನ್ ಮಾಡಿದರೆ, ಮಾಂಸ ತಲುಪಿಸಲಾಗುತ್ತದೆ. ಇದರಿಂದ ಸಾರ್ವಜನಿಕರ ಓಡಾಟ ತಪ್ಪಲಿದೆ’ ಎಂದರು.
ಪಶುಪಾಲನಾ ಇಲಾಖೆ ಉಪನಿರ್ದೇಶಕ (ಪ್ರಭಾರ) ಕೆ.ಜಿ.ನಂದೀಶ್, ಪ್ರತಿ ಕೆ.ಜಿ ಮಾಂಸಕ್ಕೆ ₹650 ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ನಿಗಮದ ಸಹಾಯಕ ನಿರ್ದೇಶಕ ನಾಗಣ್ಣ, ಪಶು ವೈದ್ಯಕೀಯ ಸಂಘದ ಅಧ್ಯಕ್ಷ ರುದ್ರಪ್ರಸಾದ್, ಸಹಾಯಕ ನಿರ್ದೇಶಕ ರೇ.ಮ.ನಾಗಭೂಷಣ್ ಉಪಸ್ಥಿತರಿದ್ದರು.