ಶಿರಾ: ದೇಶದಲ್ಲಿ ಸ್ವಾಭಿಮಾನಕ್ಕಾಗಿ ನಡೆದ ಕೊರೆಗಾಂವ್ ಯುದ್ಧ ಇಂದಿನ ಪ್ರತಿಯೊಂದು ಹೋರಾಟಕ್ಕೂ ಪ್ರೇರಣೆಯಾಗಿದೆ ಎಂದು ಶೋಷಿತ ಸಮಾಜ ಸಂಘರ್ಷ ಸಮಿತಿ ತಾಲ್ಲೂಕು ಶಾಖೆ ಅಧ್ಯಕ್ಷ ಟೈರ್ ರಂಗನಾಥ್ ಹೇಳಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಆಯೋಜಿಸಿದ್ದ ಭೀಮ ಕೊರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಮಹಾರಾಷ್ಟ್ರದ ಭೀಮಾ ತೀರದಲ್ಲಿ ಪರಿಶಿಷ್ಟರು ಸುಮಾರು 30 ಸಾವಿರ ಪೇಶ್ವೆಗಳನ್ನ ಸೆದೆ ಬಡಿದು ವಿಜಯ ಸಾಧಿಸಿದ್ದು ಇದನ್ನು ನಮ್ಮ ಇತಿಹಾಸದಲ್ಲಿ ಎಲ್ಲಿಯೂ ನಮೂದಿಸದಿರುವುದು ನೋವಿನ ಸಂಗತಿ. ಇದು ದೇಶದಲ್ಲಿ ಪರಿಶಿಷ್ಟರ ಮೇಲೆ ನಡೆಯುತ್ತಿರುವ ತಾರತಮ್ಯ ಇದನ್ನು ಅಂಬೇಡ್ಕರ್ ಅವರು ಬೆಳಕಿಗೆ ತರದಿದ್ದರೆ ದಲಿತರಿಗೆ ಬಹುದೊಡ್ಡ ಅನ್ಯಾಯವಾಗುತ್ತಿತ್ತು’ ಎಂದರು.
ಹುಲಿಕುಂಟೆ ಹೋಬಳಿ ಸಂಯೋಜಕ ಭೂತರಾಜು ಮಾತನಾಡಿ, ‘ಸಿಪಾಯಿ ದಂಗೆಗೆ ಮೊದಲೇ ನಡೆದಿದ್ದ ಭೀಮ ಕೊರೆಗಾಂವ್ ದಂಗೆಯ ಮುಂದಾಳತ್ವವನ್ನು ವಹಿಸಿದ್ದ ಸಿದ್ದನಾಯಕ ಬ್ರಿಟಿಷ್ ಸೈನ್ಯದಲ್ಲಿ ಒಳ್ಳೆಯ ಯುದ್ಧ ನಿಪುಣನಾಗಿ ಕೆಲಸ ಮಾಡುತ್ತಿರುವುದನ್ನು ಸಹಿಸದೆ ಪೇಶ್ವೆಗಳು ಅಸ್ಪೃಶ್ಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೇಶ್ವೆಗಳ ವಿರುದ್ಧ ಪ್ರಾರಂಭವಾದ ದಂಗೆ ಬಹುದೊಡ್ಡ ಕ್ರಾಂತಿ ಸೃಷ್ಟಿಸಿತು’ ಎಂದರು.