ಹಾಗಲವಾಡಿ: ‘ಗುಬ್ಬಿ ಜನತೆ ಬುದ್ಧಿ ಕಲಿಯದಿದ್ದರೆ ವಿಧಾನಸಭಾ ಕ್ಷೇತ್ರ ಅಭಿವೃದ್ಧಿ ಕಾಣುವುದಿಲ್ಲ’ ಎಂದು ಸಂಸದ ಜಿ.ಎಸ್. ಬಸವರಾಜು ಹೇಳಿದರು.
ಗುಬ್ಬಿ ತಾಲ್ಲೂಕಿನ ಬೆಟ್ಟದಹಳ್ಳಿಯಲ್ಲಿ ನಡೆದ ಶ್ರೀವೀರಭದ್ರೇಶ್ವರ ಸ್ವಾಮಿ ರಥೋತ್ಸವದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಶಾಸಕ ಎಸ್.ಆರ್. ಶ್ರೀನಿವಾಸ್ ಸನ್ಯಾಸಿಗಳ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ಮಾಧ್ಯಮಗಳ ಮೂಲಕ ತಿಳಿದಿದ್ದೇನೆ. ಶ್ರೀನಿವಾಸ್ ಕಾಂಗ್ರೆಸ್ನವರ ಜತೆ ಸೇರಿಕೊಂಡು ಬಾಯಿಗೆ ಬಂದಂತೆ ಮಾತನಾಡುವುದನ್ನು ಕಲಿತಿದ್ದಾರೆ. ಇದರ ಫಲ ಅನುಭವಿಸುತ್ತಾರೆ’ ಎಂದು ತಿಳಿಸಿದರು.
‘ಈ ತಾಲ್ಲೂಕಿನ ಅಭಿವೃದ್ಧಿಗೆ ನಾನು ಎಷ್ಟೇ ಅನುದಾನ ತಂದರೂ ತಾನೇ ಮಾಡಿದ್ದು ಎಂದು ತನ್ನ ಹೆಸರನ್ನು ಹೇಳಿಕೊಂಡು ತಿರುಗುತ್ತಿದ್ದಾರೆ. ಅಂತಹ ಶಾಸಕನಿಗೆ ನಾನು ಏನು ಹೇಳಲಿ. ಮುಂದಿನ ದಿನಗಳಲ್ಲಿ ಮತದಾರರೇ ಉತ್ತರ ನೀಡುತ್ತಾರೆ’ ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅ.ನ. ಲಿಂಗಪ್ಪ, ಮುಖಂಡರಾದ ಬಿ.ಎನ್. ನಂಜುಂಡಪ್ಪ, ನಿರಂಜನಮೂರ್ತಿ, ಸಿದ್ದಲಿಂಗಸ್ವಾಮಿ, ಸಿದ್ದರಾಮಣ್ಣ ಇದ್ದರು.