ಕೊರಟಗೆರೆ: ತಾಲ್ಲೂಕಿನ ತುಂಬಾಡಿ ಬಳಿ ಜನವರಿ 29ರ ರಾತ್ರಿ ಕಾರು ಚಾಲಕರೊಬ್ಬರನ್ನು ಕೊಲೆ ಮಾಡಿದ್ದ ಆರೋಪಿಯನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕಿನ ಗೋಪನಹಳ್ಳಿ ಪಿ.ವೀರೇಂದ್ರ ಬಂಧಿತ ಆರೋಪಿ.
ಬೆಂಗಳೂರಿನ ಕಾರು ಚಾಲಕ ನಿಸಾರ್ ಅಹಮದ್ ಅವರಿಗೆ ಬಾಡಿಗೆ ಕೊಡುವುದಾಗಿ ಹೇಳಿದ ಆರೋಪಿ ಕಾರು ಸಮೇತ ಕರೆದುಕೊಂಡು ಬಂದಿದ್ದ. ದಾರಿ ಮಧ್ಯೆ ಚಾಲಕನನ್ನು ಕೊಲೆ ಮಾಡಿ ಕಾರು ಕದ್ದೊಯ್ದು ಮಾರಾಟ ಮಾಡುವ ಉದ್ದೇಶ ಆತನದ್ದಾಗಿತ್ತು. ಅದರಂತೆ ತುಂಬಾಡಿ ಬಳಿ ಚಾಲಕನನ್ನು ಆರೋಪಿ ಚುಚ್ಚಿ ಕೊಲೆ ಮಾಡಿದ್ದ. ಈ ವೇಳೆ ಕಾರು ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದರಿಂದ ಕಾರು ಕದ್ದೊಯ್ಯದೇ ಸ್ಥಳದಲ್ಲೆ ಬಿಟ್ಟು ಪರಾರಿಯಾಗಿದ್ದ. ಅಕ್ಕನ ಮದುವೆಗೆ ಹಣ ಹೊಂದಿಸುವ ಸಲುವಾಗಿ ಕೊಲೆ ಮಾಡಿರುವುದಾಗಿ ತನಿಖೆ ವೇಳೆ ಆರೋಪಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಡಿವೈಎಸ್ಪಿ ಕೆ.ಜಿ.ರಾಮಕೃಷ್ಣಪ್ಪ, ಸಿಪಿಐ ಎಫ.ಕೆ.ನದಾಫ್, ಪಿಎಸ್ಐ ಎಚ್. ಮುತ್ತುರಾಜು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು