ಪಾವಗಡ: ಪಟ್ಟಣದಲ್ಲಿ ಶನಿವಾರ ನಡೆದ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಮೇಲ್ವಿಚಾರಕರು ತಮಗೆ ಬೇಕಿರುವವರಿಗೆ ಉತ್ತರ ಹೇಳಿಕೊಟ್ಟಿದ್ದಾರೆ. ವರ್ಷಗಟ್ಟಲೆ ಮಕ್ಕಳಿಗೆ ತರಬೇತಿ ಕೊಡಿಸಿ ಅವರ ಭವಿಷ್ಯಕ್ಕಾಗಿ ಶ್ರಮಿಸಿದ ಪೋಷಕರು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಪರೀಕ್ಷೆ ಮುಗಿದ ಕೂಡಲೇ ತಮಗೆ ಅನ್ಯಾಯವಾಗಿದೆ ಎಂದು ಮಕ್ಕಳು ಪೋಷಕರೆದುರು ಕಣ್ಣೀರು ಹಾಕುತ್ತಿದ್ದರು.
‘ಪಟ್ಟಣದ ಪ್ರೌಢಶಾಲೆಯಲ್ಲಿ ನಡೆದ ಪರೀಕ್ಷೆಯಲ್ಲಿ ಹಣ ನೀಡಿದವರಿಗೆ ಉತ್ತರ ಹೇಳಿಕೊಡಲಾಗಿದೆ. ಪರೀಕ್ಷೆ ಮುಗಿದು ಉತ್ತರ ಪತ್ರಿಕೆಗಳನ್ನು ಮೇಲ್ವಿಚಾರಕರಿಗೆ ಮರಳಿಸಿದ ನಂತರವೂ ಕೆಲ ಶಿಕ್ಷಕರು ಉತ್ತರ ಪತ್ರಿಕೆಗಳನ್ನು ತಿದ್ದಿದ್ದಾರೆ. ಇಂತಹ ಪರೀಕ್ಷೆ ನಡೆಸುವುದಾದರೂ ಏಕೆ?’ ಎಂದು ಪೋಷಕರು ಪ್ರಶ್ನಿಸಿದರು.
‘ಪ್ರಶ್ನೆ ಪತ್ರಿಕೆಯ ಫೋಟೋ ತೆಗೆದುಕೊಂಡು ಅದಕ್ಕೆ ಶಿಕ್ಷಕರೇ ಉತ್ತರ ಸಿದ್ಧಪಡಿಸಿಕೊಂಡು ಬಂದು ಬರೆಸಿದ್ದಾರೆ. ತಪ್ಪು ಉತ್ತರಗಳಿಗೆ ವೈಟ್ನರ್ ಬಳಸಿ ಸರಿ ಉತ್ತರ ಬರೆಸಲಾಗಿದೆ. ನೀರು ಕೊಡುವ ಸೋಗಿನಲ್ಲಿ ಕೊಠಡಿಗಳಿಗೆ ಹೋಗಿ ಉತ್ತರ ಹೇಳಿಕೊಟ್ಟು ಬರಲಾಗಿದೆ’ ಎಂದೂ ಪೋಷಕರು ದೂರಿದರು.
ಮರು ಪರೀಕ್ಷೆ ಮಾಡಬೇಕು ಎಂದು ಒತ್ತಾಯಿಸಿ ಪೋಷಕರಾದ ವಾಣಿ ಅಮೀರ್, ಅಂಬಿಕಾ ರಮೇಶ್, ಸೋಮಶೇಖರ್, ಸೌಮ್ಯ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದರು.