ಗುಬ್ಬಿ: ನೌಕರಿಗೆ ಸೇರಿ ಆರು ತಿಂಗಳಲ್ಲಿ ಲಂಚ ಪಡೆದ ಆರೋಪ ಹೊತ್ತಿದ್ದ ಗ್ರೇಡ್-2 ತಹಶೀಲ್ದಾರ್ ಅವರಿಗೆ ಗ್ರೇಡ್-1ಗೆ ಪದೋನ್ನತಿ ನೀಡಿ ಭ್ರಷ್ಟ ಅಧಿಕಾರಿಯನ್ನು ತಾಲ್ಲೂಕಿಗೆ ಕರೆ ತಂದಿರುವುದಕ್ಕೆ ಸಾಕ್ಷಿ ಬೇಕೆ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಗುರುರೇಣುಕಾರಾಧ್ಯ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಸ್.ಆರ್ ಶ್ರೀನಿವಾಸ್ ಎಂತಹ ವ್ಯಕ್ತಿ ಎಂಬುದು ಜಿಲ್ಲೆಗೆ ಗೊತ್ತಿದೆ. ಸಂಸದರು ಕುತಂತ್ರ ರಾಜಕಾರಣದಿಂದ ಜಾತಿಗಳ ನಡುವೆ ಕಂದಕ ಸೃಷ್ಟಿಸಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ’ ಎಂದರು.
ಮುಖಂಡ ನರಸಿಂಹಮೂರ್ತಿ ಮಾತನಾಡಿ, ‘ಸಂಸದ ಬಸವರಾಜು ಅವರನ್ನು ಬೆಂಬಲಿಸಿದರೆ ತಮ್ಮ ಕಲ್ಲು ಗಣಿಗಾರಿಕೆ ಸುಗಮವಾಗಿ ನಡೆಯುತ್ತದೆ ಎಂಬ ಉದ್ದೇಶದಿಂದ ಬಿಜೆಪಿ ಮುಖಂಡರು ಶಾಸಕರ ವಿರುದ್ಧ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯ, ಕೇಂದ್ರ ಸರ್ಕಾರದಿಂದ ಅನುದಾನ ತಂದು ಎಷ್ಟು ಅಭಿವೃದ್ಧಿ ಕಾಮಗಾರಿ ಮಾಡಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಲಿ ಎಂದರು.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ಕೆ.ಆರ್ ವೆಂಕಟೇಶ್ ಮಾತನಾಡಿ, ‘ಗ್ರಾಮ ಪಂಚಾಯಿತಿ ಸದಸ್ಯನೂ ಅಲ್ಲದ ದಿಲೀಪ್ಕುಮಾರ್ ಅವರ ಹೇಳಿಕೆಗೆ ಜಿಲ್ಲಾ ಆರೋಗ್ಯಾಧಿಕಾರಿ ವರ್ಗಾವಣೆ ಮಾಡುವ ಸರ್ಕಾರದ ನಿರ್ಧಾರ ಅನುಮಾನ ಮೂಡಿಸುತ್ತದೆ. ಶಾಸಕನಾಗುವ ಕನಸು ಕಾಣುತ್ತಿರುವ ಬಿಜೆಪಿಯ ಸ್ಥಳೀಯ ಮುಖಂಡರಿಗೆ ಮುಖಭಂಗ ಮಾಡಲು ಬಿಜೆಪಿ ವರಿ ಷ್ಠರೇ ಸಿದ್ಧತೆ ನಡೆಸಿದ್ದಾರೆ. ವಿ. ಸೋಮಣ್ಣ ಅವರ ಪುತ್ರ ಅರುಣ್ ಅವರನ್ನು ಕ್ಷೇತ್ರಕ್ಕೆ ಕರೆತರಲು ಮುಂದಾಗಿರುವುದು ಸ್ಥಳೀಯ ಬಿಜೆಪಿ ಮುಖಂಡರ ಯೋಗ್ಯತೆ ತೋರುತ್ತಿದೆ’ ಎಂದು ವ್ಯಂಗ್ಯವಾಡಿದರು.
ಪಟ್ಟಣ ಪಂಚಾಯಿತಿ ಸದಸ್ಯ ಕುಮಾರ್, ‘ಪಟ್ಟಣ ಪಂಚಾಯಿತಿಯಲ್ಲಿ ಕೊಳವೆ ಬಾವಿ ಏಜೆನ್ಸಿ ಅವರಿಂದ ಹಣ ಲೂಟಿ ಹೊಡೆದವರು ಯಾರು ಎನ್ನುವುದು ತಿಳಿಯಬೇಕಿದೆ. ಬೇರೆಯವರಿಗೆ ಸೇರಿದ ಜಾಗದಲ್ಲಿ ಮನೆ ಕಟ್ಟಿಕೊಂಡ ಬಿಜೆಪಿ ಪಟ್ಟಣ ಪಂಚಾಯಿತಿ ಸದಸ್ಯರೊಬ್ಬರು ಸಂಸದರನ್ನು ಬಳಸಿಕೊಂಡು ಸಾರ್ವಜನಿಕರಿಂದ ಹಣ ಕೀಳುತ್ತಿದ್ದಾರೆ’ ಎಂದು ಆರೋಪಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ರೇಣುಕಾ ಪ್ರಸಾದ್, ಎಪಿಎಂಸಿ ಸದಸ್ಯ ಲೋಕೇಶ್ವರ, ಮುಖಂಡರಾದ ಕೊಡಿಯಾಲ ಮಹದೇವ್, ಸಿದ್ಧರಾಜು, ಹೊಸಕೆರೆ ಬಾಬು, ರಾಜಣ್ಣ, ಚೇಳೂರು ಧಾಮು, ಕಾರ್ತೀಕೆಯನ್, ಯೋಗೀಶ್ ಇದ್ದರು.