ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚಕ್ಕೆ ಅಧಿಕಾರಿ ಬೇಡಿಕೆ: ಶ್ರೀನಿವಾಸ್ ಕಿಡಿ

ಅಧಿಕಾರಿಗಳು ಹಣ ಮಾಡುವ ಕಾಯಕ ಮಾಡುತ್ತಿದ್ದಾರೆ: ಆರೋಪ
Last Updated 28 ಜುಲೈ 2020, 7:43 IST
ಅಕ್ಷರ ಗಾತ್ರ

ಗುಬ್ಬಿ: ‘ಸಂಸದರ ಕೃಪೆಯಿಂದ ತಾಲ್ಲೂಕಿಗೆ ಬಂದಿರುವ ತಹಶೀಲ್ದಾರ್ ಸೇರಿದಂತೆ ಕೆಲವು ಅಧಿಕಾರಿಗಳು ಸಾರ್ವಜನಿಕರ ಸೇವೆ ಮಾಡುವ ಬದಲು ಮಧ್ಯವರ್ತಿಗಳನ್ನು ಇಟ್ಟುಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ’ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಆರೋಪಿಸಿದರು.

ಪಟ್ಟಣದ 19ನೇ ವಾರ್ಡ್ ಬಿಲ್ಲೆಪಾಳ್ಯದಲ್ಲಿ ₹96 ಲಕ್ಷ ವೆಚ್ಚದಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ತಾಲ್ಲೂಕಿನಲ್ಲಿ ದಕ್ಷ ಆಡಳಿತ ಮಾಡುತ್ತಿದ್ದ ಈ ಹಿಂದಿನ ತಹಶೀಲ್ದಾರ್‌ ಅವರನ್ನು ಕೆಲವು ಅಧಿಕಾರಿಗಳು ಕುತಂತ್ರ ನಡೆಸಿ ವರ್ಗಾವಣೆ ಆಗುವಂತೆ ಮಾಡಿದರು. ಆ ಸ್ಥಾನಕ್ಕೆ ಲಂಚ ಪಡೆಯುವ ಭ್ರಷ್ಟ ತಹಶೀಲ್ದಾರ್‌ರನ್ನು ನೇಮಿಸಿದ್ದಾರೆ ಎಂದು ದೂರಿದರು.

‘ಈಗಿನ ತಹಶೀಲ್ದಾರ್ ಮಾವು ಮತ್ತು ಹಲಸು ವರ್ತಕರ ಬಳಿ ಮಂಡಿ ತೆರೆಯುವ ವಿಚಾರಕ್ಕೆ ಲಂಚದ ಬೇಡಿಕೆ ಇಟ್ಟಿದ್ದಾರೆ. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಿಲ್ಲೆಪಾಳ್ಯ ವಾರ್ಡ್‌ನ ಜಮೀನೊಂದರ ದಾಖಲೆ ಮಾಡಲು ಲಕ್ಷಾಂತರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದಾರೆ. ನಾವು ಸಂಸದರಿಗೆ ಹಣಕೊಟ್ಟು ಬಂದಿದ್ದೇವೆ. ಅದಕ್ಕಾಗಿ ಹಣ ಕೇಳುತ್ತೇನೆ ಎಂದು ನೇರವಾಗಿ ಲಂಚ ವಸೂಲಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಎಲ್ಲವನ್ನು ಮೌನವಾಗಿ ನೋಡುತ್ತಿದ್ದೇನೆ. ಸೂಕ್ತ ಸಮಯದಲ್ಲಿ ಉತ್ತರ ಕೊಡುತ್ತೇನೆ. ನಾನು ಈಗ ಪ್ರಶ್ನಿಸಲು ಮುಂದಾದರೆ ಜಾತಿ ವಿರೋಧಿ ಪಟ್ಟ ಕಟ್ಟುತ್ತಾರೆ. ಎಂತಹ ಅಧಿಕಾರಿಗಳನ್ನು ಕರೆ ತಂದೆವು ಎಂದು ಜನಪ್ರತಿನಿಧಿಗಳು ಪಶ್ಚಾತಾಪ ಪಡುವ ಸಮಯ ಹತ್ತಿರದಲ್ಲಿದೆ’ ಎಂದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ಜಿ.ಎನ್.ಅಣ್ಣಪ್ಪಸ್ವಾಮಿ, ಬಿ.ಕುಮಾರ್, ಸಿ.ಮೋಹನ್, ರೇಣುಕಾ ಸ್ವಾಮಿ, ಮಮತಾ ಶಿವಪ್ಪ, ಶೌಕತ್ ಆಲಿ, ಲೋಕೇಶ್ ಬಾಬು, ಕುಮಾರಣ್ಣ, ಶಶಿಕುಮಾರ್, ಜಿ.ಎಸ್.ರಾಜಣ್ಣ, ಬಿಲ್ಲೆಪಾಳ್ಯ ನರಸಿಂಹಮೂರ್ತಿ, ನಾಗರಾಜು, ಮಂಜುನಾಥ್, ಡಿ.ರಘು, ಬುಲೆಟ್ ಬಸವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT