ತುಮಕೂರು: ಜಿಲ್ಲಾ ಅಸಂಘಟಿತ ಕಾರ್ಮಿಕರ ಹೋರಾಟ ಸಮಿತಿ ಸಿಐಟಿಯು ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ರಾಷ್ಟ್ರೀಯ ಬೇಡಿಕೆ ದಿನ ಹಾಗೂ ಮುಷ್ಕರದ ನೋಟಿಸ್ ನೀಡುವ ಚಳುವಳಿ ಅಂಗವಾಗಿ ಬುಧವಾರ ಕಾರ್ಮಿಕರು ಪ್ರತಿಭಟಿಸಿದರು.
ಕೋವಿಡ್ನಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ₹7,500 ಪರಿಹಾರ, ಕುಟುಂಬದ ತಲಾ ಒಬ್ಬರಿಗೆ ಉಚಿತವಾಗಿ 10 ಕೆ.ಜಿ ಅಕ್ಕಿ ನೀಡಬೇಕು, ಮಾಸಿಕ ಕನಿಷ್ಠ ₹21 ಸಾವಿರ ಕೂಲಿ ನಿಗದಿಪಡಿಸಬೇಕು. ಗುತ್ತಿಗೆ ಪದ್ಧತಿ ರದ್ದತಿ, ಸಾಮಾಜಿಕ ಭದ್ರತೆ ಕಾನೂನು ಜಾರಿಗೆ ಒತ್ತಾಯಿಸಲಾಯಿತು. ಸರ್ಕಾರ ಇವುಗಳನ್ನು ಜಾರಿಮಾಡದಿದ್ದರೆ ನ. 26ರಂದು ಅಖಿಲ ಭಾರತ ಮುಷ್ಕರ ನಡೆಸಲು ತೀರ್ಮಾನಿಸಲಾಯಿತು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹಾಂತೇಶ್, ‘ಹೆಚ್ಚಿನ ಶ್ರೀಮಂತರು ಸರ್ಕಾರಕ್ಕೆ ತೆರಿಗೆ ವಂಚಿಸಲು ತಂತ್ರ ರೂಪಿಸುತ್ತಾರೆ. ಆದರೆ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಬಡ ಕಾರ್ಮಿಕರು ಪ್ರತ್ಯಕ್ಷ, ಪರೋಕ್ಷವಾಗಿ ತೆರಿಗೆ ನೀಡುತ್ತಾರೆ. ಇಂತಹ ಕಾರ್ಮಿಕರನ್ನು ಗುತ್ತಿಗೆ ಕಾರ್ಮಿಕ ಕಾಯ್ದೆಯಡಿ ದುಡಿಸಿಕೊಂಡು ನೀಡಬೇಕಾದ ಸವಲತ್ತುಗಳನ್ನು ಕೊಡದೆ ವಂಚಿಸಲಾಗುತ್ತಿದೆ’ ಎಂದು ಆರೋಪಿಸಿದರು.
ಕಟ್ಟಡ ಕಾರ್ಮಿಕ ಸಂಘಟನೆ ಜಿಲ್ಲಾ ಘಟದ ಅಧ್ಯಕ್ಷ ಬಿ.ಉಮೇಶ್ ಮಾತನಾಡಿದರು. ಸಂಘಟನೆ ಮುಖಂಡರಾದಗಂಗಾಧರ್, ರಂಗಮ್ಮ, ನೇತ್ರಮ್ಮ, ಮುತ್ತುರಾಜು, ಜಗದೀಶ್, ದರ್ಶನ್, ನಾಗರಾಜು, ಸಿದ್ದರಾಜು, ಶಂಕರಪ್ಪ, ರಾಮಣ್ಣ, ಕುಮಾರ್, ವಸೀಂ ಅಕ್ರಮ್ ಭಾಗವಹಿಸಿದ್ದರು.