ಪಾವಗಡ: ಪಟ್ಟಣದ ನ್ಯಾಯಾಲಯದ ಮೂವರು ನ್ಯಾಯಾಧೀಶರು ವಕೀಲರೊಂದಿಗೆ ಮಂಗಳವಾರ ರಸ್ತೆಗಿಳಿದು ಲಾಕ್ಡೌನ್ ಜಾರಿ ಬಗ್ಗೆ ಪರಿಶೀಲಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಹನುಮಂತಪ್ಪ, ಲಾಕ್ಡೌನ್ ಅನ್ನು ಪೊಲೀಸರು ಸಮರ್ಪಕವಾಗಿ ಜಾರಿಗೊಳಿಸಿಲ್ಲ. 6ರಿಂದ 10ರವರೆಗೆ ನಿತ್ಯ ದಿನಸಿ ಪದಾರ್ಥಗಳನ್ನು ಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದರೆ, 10 ಗಂಟೆ ನಂತರವೂ ಜನ ಅನಗತ್ಯವಾಗಿ ಓಡಾಡುತ್ತಿದ್ದಾರೆ. 10ಕ್ಕೆ ತರಕಾರಿ ಅಂಗಡಿಗಳು ಮುಚ್ಚಬೇಕಿತ್ತು. 11 ಗಂಟೆಯಾದರೂ ತರಕಾರಿ ಮಾರಾಟ ಮಾಡಲಾಗುತ್ತಿದೆ. ಜನರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಈಗಾಗಲೆ ಪೊಲೀಸರನ್ನು ಕರೆಸಿ ಸಭೆ ನಡೆಸಿ ಸೂಚನೆಗಳನ್ನು ನೀಡಲಾಗಿತ್ತು. ಆದರೆ, ಸಮರ್ಪಕವಾಗಿ ಪೊಲೀಸರು ಕಾರ್ಯ ನಿರ್ವಹಿಸುತ್ತಿಲ್ಲ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಇಬ್ಬರು ಪೊಲೀಸರನ್ನು ನಿಯೋಜಿಸಿ ಅನಗತ್ಯವಾಗಿ ಪಟ್ಟಣಕ್ಕೆ ಬರುವವರನ್ನು ತಡೆಯಬೇಕಿತ್ತು. ಆಸ್ಪತ್ರೆ, ತುರ್ತು ಕೆಲಸಕ್ಕೆ ಬರುವರಿಗೆ ಮಾತ್ರ ಅವಕಾಶ ಕೊಡಬೇಕು. ಆದರೆ, ಈ ಕೆಲಸವನ್ನು ಮಾಡುತ್ತಿಲ್ಲ. ಮತ್ತೊಮ್ಮೆ ಸಭೆ ಕರೆದು ಸೂಚನೆ ನೀಡಲಾಗುವುದು. ಲಾಕ್ಡೌನ್ ಪಾಲಿಸದಿದ್ದಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತದೆ. ದೇಶಕ್ಕೆ ಮಾರಕವಾಗಿ ಪರಿಣಮಿಸುತ್ತದೆ ಎಂದು ಎಚ್ಚರಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಜಗದೀಶ್ ಬಿಸೆರೋಟಿ, ಹೆಚ್ಚುವರಿ ನ್ಯಾಯಾಧೀಶ ಭರತ್ ಯೋಗೇಶ್ ಕರಗುದರಿ, ಸರ್ಕಾರಿ ವಕೀಲ ಮಂಜುನಾಥ್, ವಕೀಲರ ಸಂಘದ ಅಧ್ಯಕ್ಷ ಅಕ್ಕಲಪ್ಪ, ಕಾರ್ಯದರ್ಶಿ ರಮೇಶ್, ಖಜಾಂಚಿ ರಾಜಣ್ಣ, ವಕೀಲ ಪಾಂಡುರಂಗಪ್ಪ, ಯಜ್ಞನಾರಾಯಣಶರ್ಮ, ಪ್ರಭಾಕರರೆಡ್ಡಿ ಉಪಸ್ಥಿತರಿದ್ದರು.