ತುಮಕೂರು: ಯಾವುದೇ ಸೂಚನೆ ನೀಡದೆ ಬಾಳನಕಟ್ಟೆಯಲ್ಲಿನ ಬೀದಿ ಬದಿ ಅಂಗಡಿ ಮಳಿಗೆಗಳನ್ನು ಏಕಾಏಕಿ ತೆರವುಗೊಳಿಸಿರುವುದಕ್ಕೆ ಚಿಲ್ಲರೆ ಹಣ್ಣು ಮಾರಾಟಗಾರರ ಸಂಘದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಟೌನ್ಹಾಲ್ನಲ್ಲಿ ಸೇರಿದ ಸಂಘದ ಸದಸ್ಯರು ಸ್ಮಾರ್ಟ್ಸಿಟಿ ಹಾಗೂ ಪಾಲಿಕೆ ಅಧಿಕಾರಿಗಳು ಯಾವುದೇ ನೋಟಿಸ್ ನೀಡದೆ ಏಕಾಏಕಿ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಿದ್ದಾರೆ ಎಂದು ಆರೋಪಿಸಿದರು.
ಸಂಘದ ಅಧ್ಯಕ್ಷ ಖುದ್ದೂಸ್ ಅಹ್ಮದ್, ‘15 ವರ್ಷಗಳಿಂದ ಇಲ್ಲಿ ವ್ಯಾಪಾರಿಗಳು ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಈಗ ಸ್ಮಾರ್ಟ್ಸಿಟಿ ಅಧಿಕಾರಿಗಳು ಕಾಮಗಾರಿ ಹೆಸರಿನಲ್ಲಿ ತೊಂದರೆ ನೀಡುತ್ತಿದ್ದಾರೆ. 3 ವರ್ಷಗಳ ಹಿಂದೆ ಚರಂಡಿಯ ಮೇಲೆ ಮಳಿಗೆಗಳನ್ನು ನಿರ್ಮಿಸಲಾಗಿತ್ತು. ಇವುಗಳನ್ನು ಏಕಾಏಕಿ ತೆರವುಗೊಳಿಸಿ ವ್ಯಾಪಾರಿಗಳ ಬದುಕು ಮೂರಾಬಟ್ಟೆ ಮಾಡಿದ್ದಾರೆ ಎಂದು ದೂರಿದರು.
ಸ್ಮಾರ್ಟ್ಸಿಟಿ, ಮಹಾನಗರ ಪಾಲಿಕೆ ಇಲ್ಲಿಯೇ ಕಟ್ಟಡಗಳನ್ನು ನಿರ್ಮಿಸಿಕೊಟ್ಟರೆ ವ್ಯಾಪಾರಿಗಳು ಬಾಡಿಗೆ ಕಟ್ಟಲು ಸಿದ್ಧರಿದ್ದಾರೆ. ಆದರೆ ವ್ಯಾಪಾರಿಗಳನ್ನು ಸ್ಥಳಾಂತರಗೊಳಿಸುವವರೆಗೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಅಧ್ಯಕ್ಷ ಅತೀಕ್ ಅಹ್ಮದ್, ವ್ಯಾಪಾರಿಗಳಿಗೆ ತೊಂದರೆ ಮಾಡಬಾರದು ಎಂದು ಅಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದರು.