ತುಮಕೂರು: ಸಂವಿಧಾನದ 73-74ನೇ ತಿದ್ದುಪಡಿಯ ಮೂಲಕ ರಾಜೀವ್ಗಾಂಧಿ ಅವರು ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತಂದರು. ಇಂದಿನ ಬಿಜೆಪಿ ಸರ್ಕಾರ ಪಂಚಾಯಿತಿ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆಂಚಮಾರಯ್ಯ ಆರೋಪಿಸಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ರಾಜೀವ್ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅವಧಿ ಮುಗಿದ ಗ್ರಾಮ ಪಂಚಾಯಿತಿಗಳಿಗೆ ಪಕ್ಷದ ಕಾರ್ಯಕರ್ತರನ್ನು ಸದಸ್ಯರಾಗಿ ನೇಮಿಸುವ ಹುನ್ನಾರವನ್ನು ಬಿಜೆಪಿ ನಡೆಸಿದೆ. ಇದನ್ನು ನಾವೆಲ್ಲರೂ ಪ್ರಬಲವಾಗಿ ವಿರೋಧಿಸಬೇಕಿದೆ ಎಂದರು.
ಜಿಲ್ಲಾ ಘಟಕದ ಅಧ್ಯಕ್ಷ ಆರ್.ರಾಮಕೃಷ್ಣ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಕೊರೊನಾ ನಿಯಂತ್ರಿಸಲು ವಿಫಲವಾಗಿವೆ. ಕೋವಿಡ್–19 ನೆಪದಲ್ಲಿ ಕಾರ್ಮಿಕರು, ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತರಲಾಗುತ್ತಿದೆ’ ಎಂದು ದೂರಿದರು.
ದೇಶ ಮುಂದುವರೆಯಬೇಕಾದರೆ ಯುವಜನರು ನಿರ್ಣಾಯಕ ಪಾತ್ರ ವಹಿಸಬೇಕು ಎಂಬ ಉದ್ದೇಶದಿಂದ ರಾಜೀವ್ಗಾಂಧಿ ಅವರು 21ನೇ ವಯಸ್ಸಿಗಿದ್ದ ಮತದಾನದ ಹಕ್ಕನ್ನು 18 ವರ್ಷಕ್ಕೆ ಇಳಿಸಿದರು. ವಿಜ್ಞಾನ, ತಂತ್ರಜ್ಞಾನಕ್ಕೆ ಒತ್ತು ನೀಡಿದ ಪರಿಣಾಮ ಜನಸಾಮಾನ್ಯರ ಕೈಗೆಟುಕದೆ ಇದ್ದ ಪೋನ್, ಟಿ.ವಿ, ಎಲೆಕ್ಟ್ರಾನಿಕ್ ವಸ್ತುಗಳು ಇಂದು ಪ್ರತಿ ಮನೆಯನ್ನು ಅಲಂಕರಿಸಿವೆ. ಈ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದ ಬಿಜೆಪಿಯವರು ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು ಎಂದು ಪ್ರಶ್ನಿಸುತ್ತಿರುವುದು ವಿಪರ್ಯಾಸ’ ಎಂದರು.
ಮುಖಂಡ ರೆಡ್ಡಿ ಚಿನ್ನಯಲ್ಲಪ್ಪ, ‘ನರೇಂದ್ರಮೋದಿ ಬಿಟ್ಟಿ ಪ್ರಚಾರ ಪಡೆಯುತ್ತಿರುವ ಟಿ.ವಿ ಮಾಧ್ಯಮ, ಮನ್ಕೀ–ಬಾತ್, ಸಾಮಾಜಿಕ ಜಾಲತಾಣಗಳು ಎಲ್ಲರ ಕೈಗೆ ಸಿಗುವಂತಾಗಿದ್ದು, ರಾಜೀವ್ಗಾಂಧಿ ಅವರ ದೂರದೃಷ್ಟಿಯ ಫಲ’ ಎಂದು ಹೇಳಿದರು.
ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ರುದ್ರೇಶ್, ಮುಖಂಡರಾದ ಪುಟ್ಟರಾಜು, ಆಟೊ ರಾಜು, ರೇವಣ್ಣ ಸಿದ್ದಯ್ಯ, ಮಂಜಣ್ಣ, ಶ್ರೀನಿವಾಸ್, ನಾಗಮಣಿ, ಗೀತಾ, ಶಿವಣ್ಣ, ಪ್ರಕಾಶ್ ಉಪಸ್ಥಿತರಿದ್ದರು.