ಕೋರ: ಹೋಬಳಿ ಹಿರೇತೊಟ್ಲು ಕೆರೆಯಿಂದ ರಾಮಗೊಂಡನಹಳ್ಳಿವರೆಗೆ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಮುಗಿದು ಎರಡು ಮೂರು ದಿನ ಕಳೆಯುವುದರೊಳಗಾಗಿ ಕಾಮಗಾರಿಯ ಅಸಲೀ ಬಣ್ಣ ಬಯಲಾಗಿದೆ.
ಹಿರೇತೊಟ್ಲುಕೆರೆ ಹಾಗೂ ರಾಮಗೋಂಡನಹಳ್ಳಿ ರಸ್ತೆ ಮಾರ್ಗದಲ್ಲಿ ಅಲ್ಲಲ್ಲಿ ಗುಂಡಿಗಳು ಬಿದ್ದು ವಾಹನ ಸವಾರರಿಗೆ ತೊಂದರೆಯಾಗಿತ್ತು. ಮೂರು ದಿನದ ಹಿಂದೆ ಲೋಕೋಪಯೋಗಿ ಸಿಬ್ಬಂದಿ ರಸ್ತೆ ಗುಂಡಿ ಮುಚ್ಚಿದ್ದಾರೆ. ಗುಂಡಿ ಮುಚ್ಚಿ ಹೋದ ಎರಡೇ ದಿನದಲ್ಲಿ ಟಾರ್ ಕಿತ್ತು ರಸ್ತೆ ತುಂಬಾ ರಾಡಿಯಾಗಿದೆ.
‘ಇದೇ ರಸ್ತೆಯ ಗುಂಡಿಗಳಿಗೆ ವರ್ಷಕ್ಕೆ ಎರಡು ಬಾರಿ ತೇಪೆ ಹಾಕಲಾಗುತ್ತಿದೆ. ರಸ್ತೆ ತೇಪೆಯ ಹೆಸರಿನಲ್ಲಿ ಲೋಕೋಪಯೋಗಿ ಇಲಾಖೆ ಅದಿಕಾರಿಗಳು ಕೆಲ ಜನಪ್ರತಿನಿಧಿಗಳು ಜೇಬು ಭರ್ತಿ ಮಾಡಿಕೊಳ್ಳುತ್ತಿದ್ದಾರೆ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಡಿಸಿದ್ದಾರೆ.