ಶಿರಾ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಆಗಸ್ಟ್ 11ರಂದು ಬಂದ್ಗೆ ಕರೆ ನೀಡಿರುವುದಾಗಿ ರೈತಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಧನಂಜಯಾರಾಧ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ವಿಂಟಲ್ಗೆ ₹ 18 ಸಾವಿರಕ್ಕೆ ಮಾರಾಟವಾಗುತ್ತಿದ್ದ ಉಂಡೆ ಕೊಬ್ಬರಿ ಈಗ ₹7,500 ಮಾರಾಟವಾಗುತ್ತಿದೆ. ಈ ಬಗ್ಗೆ ಸರ್ಕಾರ ಜಾಣ ಮೌನ ತಾಳಿದೆ ಎಂದರು.
ಕೇಂದ್ರ ಸರ್ಕಾರ ₹11,750 ಬೆಂಬಲ ಬೆಲೆ ನಿಗದಿ ಮಾಡಿದೆ. ಇದು ಅವೈಜ್ಞಾನಿಕ. ಸ್ವಾಮಿನಾಥನ್ ವರದಿಯಂತೆ ಉತ್ಪಾದನೆ ವೆಚ್ಚ ಮತ್ತು ಅರ್ಧದಷ್ಟು ಲಾಬಾಂಶ ಸೇರಿಸಿ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದರು.
ತೋಟಗಾರಿಕೆ ಇಲಾಖೆ ₹16,750 ಹಾಗೂ ರಾಜ್ಯದ ಕೃಷಿ ಬೆಲೆ ಆಯೋಗ ₹18 ಸಾವಿರ ಬೆಲೆ ನೀಡುವಂತೆ ವರದಿ ನೀಡಿದೆ. ತೆಂಗು ಬೆಳೆ ಹವಾಮಾನ ವೈಪರಿತ್ಯದಿಂದ ಅನೇಕ ರೋಗಗಳಿಗೆ ತುತ್ತಾಗಿ ಇಳುವರಿ ಕುಂಠಿತವಾಗಿದೆ. ರೈತರ ಜೀವನ ನಿರ್ವಹಣೆ ವೆಚ್ಚ ಹಾಗೂ ಉತ್ಪಾದನೆ ವೆಚ್ಚ ದುಬಾರಿಯಾಗಿರುವುದರಿಂದ ತೆಂಗು ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ₹25 ಸಾವಿರ ಬೆಂಬಲ ಬೆಲೆ ನಿಗದಿಪಡಿಸಬೇಕು. ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ತೆಂಗು ಬೆಳೆಗಾರರ ಹಿತ ಕಾಯಬೇಕು ಎಂದರು.
ರೈತಸಂಘದ ಉಪಾಧ್ಯಕ್ಷ ಕುದುರೆಕುಂಟೆ ಲಕ್ಕಣ್ಣ, ಜುಂಜಣ್ಣ, ಪರಮೇಶ್, ಪ್ರಭುಸ್ವಾಮಿ, ಕೃಷ್ಣಪ್ಪ ಗೋಷ್ಠಿಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.