ಪಾವಗಡ: ಸಮಾಜ ಸುಧಾಕರು, ಸಂತರಿಂದ ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಸಾಧ್ಯ ಎಂದು ಚಿತ್ರದುರ್ಗದ ಶಿವಮೂರ್ತಿ ಮುರುಘ ಶರಣರು ತಿಳಿಸಿದರು.
ತಾಲ್ಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ಭಾನುವಾರ ಸಂಜೆ ಭೇಟಿ ನೀಡಿ ಮಾತನಾಡಿದರು.
ಸಮಾಜದಲ್ಲಿ ಜಾತಿಗಳು ಎಷ್ಟು ಮುಖ್ಯವೋ, ಜಾತಿಗಳ ನಡುವಿನ ಸಾಮರಸ್ಯ, ಪ್ರೀತಿಗೂ ಅಷ್ಟೇ ಪ್ರಾಮುಖ್ಯತೆ ಇದೆ. ಅಸ್ಪೃಶ್ಯತೆ ಸಮುದಾಯಗಳ ನಡುವೆ ಅಸಮಾನತೆ ಸೃಷ್ಟಿಸುತ್ತದೆ ಎಂದರು.
ಜಾತಿ ತಾರತಮ್ಯದ ವಿರುದ್ಧ ಬಸವಣ್ಣ, ಅಂಬೇಡ್ಕರ್, ಗಾಂದೀಜಿ ಸೇರಿದಂತೆ ಸಾಕಷ್ಟು ಸಂತರು, ಸಮಾಜ ಸುಧಾರಕರು ಹೋರಾಟ ಮಾಡಿದ್ದಾರೆ. ಅಸ್ಪೃಶ್ಯತೆ ನಿವಾರಣೆಯಲ್ಲಿ ಸರ್ಕಾರಗಳಿಗಿಂತ ಸಾಧು ಸಂತರ ಪಾತ್ರ ದೊಡ್ಡದು ಎಂದರು.
ಸಹಭೋಜನ, ಸಹಚಿಂತನ, ಸಹ ಜೀವನದ ಮುಖಾಂತರ ಅಸ್ಪೃಶ್ಯತೆ ನಿವಾರಿಸಿ, ಸಮಾಜಿಕ ಸಾಮರಸ್ಯ ತರಲು ಪ್ರಯತ್ನಿಸಬೇಕಿದೆ. ಶಾಂತಿ ಸ್ಥಾಪನೆಗಾಗಿ ಶ್ರಮಿಸಬೇಕು ಎಂದರು.
ಹಿರಿಯೂರು ಆದಿ ಜಾಂಬವ ಮಠದ ಷಡಾಕ್ಷರಿ ಸ್ವಾಮೀಜಿ, ದೇಶದಲ್ಲಿರುವ ವಿವಿಧ ಜಾತಿ, ಸಮುದಾಯಗಳ ಜನರು ಪ್ರೀತಿ ಬಾಂಧವ್ಯದಿಂದ ಬದುಕು ಸಾಧಿಸಬೇಕು ಎಂದರು.
ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮೀಸೆ ಮಹಲಿಂಗಪ್ಪ ಮಾತನಾಡಿ, ಕಾಡುಗೊಲ್ಲ ಸಮುದಾಯ ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಜನಾಂಗದವರು ಮೂಢನಂಬಿಕೆಯ ಹಿಂದೆ ಬೀಳದೆ, ನಾಗರೀಕ ಜೀವನ ನಡೆಸಬೇಕು ಎಂದರು.
ಸಿದ್ದಾಪುರ ರಾಮಮೂರ್ತಿ ಸ್ವಾಮೀಜಿ, ವಿಧಾನ ಪರಿಷತ್ತಿನ ಸದಸ್ಯೆ ಜಯಮ್ಮ, ಮುಖಂಡ ನರಸಿಂಹಯ್ಯ, ಕೃಷ್ಣಗಿರಿ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.